ಸೂರತ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಪ್ಲ್ಯಾಟ್, ಕಾರುಗಳನ್ನು ಉಡುಗೊರೆ ನೀಡಿದ್ದ ಸೂರತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲ್ಕಿಯಾ ತನ್ನ ಉದ್ಯೋಗಿಗಳಿಗೆ ಭವಿಷ್ಯ ನಿಧಿಯ (ಪಿಎಫ್) ನ್ನು ಪಾವತಿಸಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯ ಮಾಲಿಕನಿಗೆ ಸೂರತ್ ನ ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ ಒ) ಸಾವ್ಜಿ ಧೋಲ್ಕಿಯಾ ಗೆ ನೊಟೀಸ್ ಜಾರಿ ಮಾಡಿದ್ದು, ಸುಮಾರು 16.66 ಕೋಟಿ ಮೊತ್ತದ ಪಿಎಫ್ ಪಾವತಿ ಮಾಡದೇ ಇರುವುದನ್ನು ಪ್ರಶ್ನಿಸಿದೆ.
ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯಲ್ಲಿ ವಜ್ರ ವ್ಯಾಪಾರದ ನೌಕರರೂ ಸೇರಿದಂತೆ ಒಟ್ಟು 3,165 ನೌಕರರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಕೇವಲ 17 ಉದ್ಯೋಗಿಗಳನ್ನಷ್ಟೇ ಇಪಿಎಫ್ ವ್ಯಾಪ್ತಿಗೆ ಸೇರಿಸಲಾಗಿದೆ. ಇದನ್ನು ಕೈಗಾರಿಕಾ ನಿಯಮ, ಭವಿಷ್ಯ ನಿಧಿಯ ನಿಮಯದ ಉಲ್ಲಂಘನೆ ಎಂದು ಸೂರತ್ ನ ನೌಕರರ ಭವಿಷ್ಯ ನಿಧಿ ಸಂಘಟನೆ ಆರೋಪಿಸಿದ್ದು, ನೊಟೀಸ್ ಜಾರಿ ಮಾಡಿದೆ.
ಸಂಸ್ಥೆಯ ವಿರುದ್ಧ ಆರೋಪ ಸಾಬೀತಾದರೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹಲವು ವರ್ಷಗಳಿಂದ ನೌಕರರಿಗೆ ಪಾವತಿ ಮಾಡದೇ ಇರುವ ಪಿಎಫ್ ನ ಒಟ್ಟು ಮೊತ್ತ 16.66 ಕೋಟಿಯಷ್ಟಾಗಿದ್ದು, ಸಂಪೂರ್ಣ ಮೊತ್ತವನ್ನು 15 ದಿನಗಳಲ್ಲಿ ಪಾವತಿ ಮಾಡುವಂತೆ ಸಂಸ್ಥೆಗೆ ಸೂಚನೆ ನೀಡಲಾಗಿದೆ.