ನವದೆಹಲಿ: ಜುಲೈ 2014ರಿಂದ ಆಗಸ್ಟ್ 2015ರ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಖಾತೆ ತೆರೆದವರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕುಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಈ ತಿಂಗಳ 30ರೊಳಗೆ ನೀಡಬೇಕು. ವಿದೇಶಿ ತೆರಿಗೆ ಅಂಗೀಕಾರ ಕಾಯ್ದೆಯಡಿ ಅನುಸರಣೆ ಮಾಡಿಕೊಳ್ಳಲು ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ.
ಒಂದು ವೇಳೆ ಈ ಕಾಲಾವಧಿಯೊಳಗೆ ಗ್ರಾಹಕರು ತಮ್ಮ ವಿವರ ನೀಡಿ ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಬ್ಯಾಂಕುಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಆ ಗ್ರಾಹಕನ ಖಾತೆಯನ್ನು ತಡೆಹಿಡಿಯುವ ಅವಕಾಶವಿದೆ.
ಒಮ್ಮೆ ವಿವರಗಳನ್ನು ಗ್ರಾಹಕ ಬ್ಯಾಂಕುಗಳಿಗೆ ಒದಗಿಸಿದರೆ ನಂತರ ಆತ ಖಾತೆಯಲ್ಲಿ ವ್ಯವಹಾರ ಮುಂದುವರಿಸಲು ಅವಕಾಶ ನೀಡಲಾಗುವುದು. ವಿದೇಶಿ ತೆರಿಗೆ ಅಂಗೀಕಾರ ಕಾಯ್ದೆಯ ನಿಯಮಗಳಡಿ ಬರುವ ಖಾತೆಗಳಿಗೆ ಇದು ಅನ್ವಯವಾಗುತ್ತದೆ.
ಜುಲೈ 2014ರಿಂದ ಆಗಸ್ಟ್ 31, 2015ರೊಳಗೆ ಎಲ್ಲಾ ವೈಯಕ್ತಿಕ ಮತ್ತು ಎಂಟಿಟಿ ಖಾತೆ ತೆರೆದವರು ವಿದೇಶಿ ಖಾತೆ ತೆರಿಗೆ ಅಂಗೀಕಾರ ಕಾಯ್ದೆಯಡಿ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಂದ ಸ್ವಯಂ ಪ್ರಮಾಣೀಕರಣ ಪಡೆದುಕೊಳ್ಳಬೇಕು.
ಜುಲೈ 2015ರಲ್ಲಿ ಭಾರತ ಮತ್ತು ಅಮೆರಿಕಾ ತೆರಿಗೆ ಸುಧಾರಣಾ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಪ್ರಕಾರ,ತೆರಿಗೆ ವಂಚನೆದಾರರ ಬಗ್ಗೆ ಎರಡು ರಾಷ್ಟ್ರಗಳ ನಡುವೆ ಹಣಕಾಸು ಸ್ವಯಂ ವಿನಿಮಯ ಪ್ರಯತ್ನಗಳನ್ನು ನಡೆಸುವುದಾಗಿದೆ.
ಒಂದು ವೇಳೆ ಖಾತೆದಾರರು ಏಪ್ರಿಲ್ 30ರೊಳಗೆ ಆಧಾರ್ ಸಂಖ್ಯೆಯನ್ನು ನೀಡಿ ಸ್ವಯಂ ಅಂಗೀಕಾರ ಮಾಡಿಕೊಳ್ಳದಿದ್ದರೆ ಖಾತೆಗಳನ್ನು ತಡೆಹಿಡಿಯಬಹುದು. ನಂತರ ಖಾತೆದಾರನಿಗೆ ಯಾವುದೇ ರೀತಿಯ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.
ಇಲ್ಲಿ ಖಾತೆಯೆಂದರೆ ಬ್ಯಾಂಕು, ವಿಮೆ, ಷೇರು ಇತ್ಯಾದಿಗಳೆಲ್ಲವೂ ಒಳಗೊಳ್ಳುತ್ತದೆ. ಖಾತೆ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಕೂಡ ನಮೂದಿಸಬೇಕು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos