ನವದೆಹಲಿ: ಹಳೆಯ ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದಿಂದ ಕಪ್ಪು ಹಣ ಸಂಗ್ರಹವನ್ನು ಹೊಡೆದೋಡಿಸಬಹುದು ಎಂಬ ಬಗ್ಗೆ ವ್ಯಕ್ತಪಡಿಸುವ ಸಂಶಯಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಹಣವನ್ನು ಬ್ಯಾಂಕಿನಲ್ಲಿ ಇಡುವುದರಿಂದ ಅದರ ಬಣ್ಣ ಬದಲಾಗುವುದಿಲ್ಲ. ಬದಲಿಗೆ ಅನಾಮಧೇಯ ಹಣವನ್ನು ಗುರುತಿಸಿ ಅದರ ಮಾಲಿಕರನ್ನು ಪತ್ತೆಹಚ್ಚಬಹುದು ಎಂದು ಹೇಳಿದ್ದಾರೆ.
'ನೋಟುಗಳ ಚಲಾವಣೆ ಹಿಂತೆಗೆತ-ಎರಡು ತಿಂಗಳ ಹಿನ್ನೋಟ' ಕುರಿತು ಫೇಸ್ ಬುಕ್ ನಲ್ಲಿ ಹೇಳಿಕೆಯನ್ನು ಅವರು ಪೋಸ್ಟ್ ಮಾಡಿ, ಜನರು ಅನುಭವಿಸಿದ ನೋವು ಮತ್ತು ಅನನುಕೂಲತೆ ದೂರವಾಗಿದ್ದು ಆರ್ಥಿಕ ಚಟುವಟಿಕೆಗಳು ಮತ್ತೆ ಮರು ಸ್ಥಾಪನೆಯಾಗುತ್ತಿವೆ ಎಂದರು.
ಬ್ಯಾಂಕುಗಳಿಗೆ ಹೆಚ್ಚಿನ ಹಣ ಹರಿದುಬಂದರೆ ಕಡಿಮೆ ಬಡ್ಡಿ ಸಿಗುತ್ತದೆ ಎಂದು ಕೂಡ ಹೇಳಿದ್ದಾರೆ.
ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಹಣದಲ್ಲಿ ಶೇಕಡಾ 86ರಷ್ಟು ಬಿಳಿ ಹಣವಾದರೆ, ಶೇಕಡಾ 12.2 ಕಪ್ಪು ಹಣವಾಗಿದ್ದು ಮಾರುಕಟ್ಟೆಯಿಂದ ಹೊರ ಬಿದ್ದಿದೆ. ನೋಟುಗಳ ಚಲಾವಣೆ ಹಿಂತೆಗೆತ ಒಂದು ಮಹತ್ವಪೂರ್ಣ ನಿರ್ಧಾರವಾಗಿದ್ದು, ಬ್ಯಾಂಕುಗಳ ಹೊರಗೆ ಸರದಿ ಸಾಲು ಕಣ್ಮರೆಯಾಗಿದೆ ಮತ್ತು ಮತ್ತೆ ಹಣಗಳಿಕೆ ಮುಂದೆ ಸಾಗಿದೆ. ಆರ್ಥಿಕ ಚಟುವಟಿಕೆಗಳು ಮರುಕಳಿಸಿವೆ ಎನ್ನುತ್ತಾರೆ.
ನೋಟುಗಳ ಚಲಾವಣೆ ಹಿಂತೆಗೆತಕ್ಕೆ ಧೈರ್ಯ ಮತ್ತು ಶಕ್ತಿ ಎರಡೂ ಬೇಕಾಗಿದ್ದವು. ನಿರ್ಧಾರವನ್ನು ಜಾರಿಗೆ ತರುವುದು ತುಂಬಾ ನೋವಿನ ವಿಷಯವಾಗಿತ್ತು. ಅದಕ್ಕೆ ಸಾಕಷ್ಟು ಟೀಕೆ, ವಿರೋಧ, ಅನನುಕೂಲತೆಗಳು ಎದುರಾದವು, ಆದರೆ ಅವು ತಾತ್ಕಾಲಿಕವಾಗಿತ್ತು ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಪ್ಪು ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಡುವುದರಿಂದ ಅದರ ಬಣ್ಣ ಬದಲಾಗುವುದಿಲ್ಲ. ಅದರ ಬದಲಾಗಿ ಅದು ಅನಾಮಧೇಯತೆಯಿಂದ ಹೊರಬಂದು ಅದರ ಮಾಲಿಕರು ಯಾರು ಎಂದು ಗೊತ್ತಾಗುತ್ತದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos