ನವದೆಹಲಿ: ಆರ್ಥಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.
ಆರ್ಥಿಕ ವರ್ಷವನ್ನು ಏಪ್ರಿಲ್ ನಿಂದ ಮಾರ್ಚ್ ಬದಲು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಇದೇ ವೇಳೆ ಫೆಬ್ರವರಿ 2018ರಿಂದ ಸಾಮಾನ್ಯ ಬಜೆಟ್ ಅನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮಂಡಿಸಬಹುದೆ ಎಂಬುದರ ಬಗ್ಗೆ ವಿವರಣೆ ನೀಡಲು ಅವರು ನಿರಾಕರಿಸಿದರು.
ಏಪ್ರಿಲ್ನಿಂದ ಮಾರ್ಚ್ವರೆಗಿನ ಆರ್ಥಿಕ ವರ್ಷದ ಕಾರಣದಿಂದ ರೈತರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಜನವರಿ 1 ರಿಂದ ಡಿಸೆಂಬರ್ 31ರ ವರೆಗೆ ಅನ್ವಯವಾಗುವಂತೆ ಆರ್ಥಿಕ ವರ್ಷ ರೂಪಿಸಲು ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ನೀತಿ ಆಯೋಗದ ಸಭೆಯಲ್ಲಿ ಹೇಳಿದ್ದರು.
ಈಗಿರುವ ಪದ್ಧತಿಯಂತೆ ಹಣಕಾಸು ವರ್ಷ ಆರಂಭವಾಗುವ ಏಪ್ರಿಲ್ 1ರಿಂದ ಜನವರಿ 1ಕ್ಕೆ ಬದಲಾಯಿಸುವ ಸಾಧ್ಯತೆಗಳನ್ನು ಅಧ್ಯಯನ ನಡೆಸಲು ಸರ್ಕಾರ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿತ್ತು. ಸಮಿತಿ ಕಳೆದ ಡಿಸೆಂಬರ್ ನಲ್ಲಿ ವರದಿಯನ್ನು ಮಂಡಿಸಿತ್ತು. ವಿವಿಧ ಕೃಷಿ ಬೆಳೆಗಳ ಅವಧಿಗಳ ಮೇಲೆ ಇದರ ಪರಿಣಾಮ ಮತ್ತು ವ್ಯಾಪಾರ, ವಹಿವಾಟಿನ ಮೇಲೆ ಅದರ ಪರಿಣಾಮ, ತೆರಿಗೆ ವ್ಯವಸ್ಥೆ ಮತ್ತು ಪ್ರಕ್ರಿಯೆಗಳು, ಅಂಕಿಅಂಶಗಳು ಮತ್ತು ದಾಖಲೆಗಳ ಸಂಗ್ರಹದ ಮೇಲಿನ ಪರಿಣಾಮಗಳ ಕುರಿತು ಸಮಿತಿ ವರದಿ ಸಲ್ಲಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos