ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯ ಆರಂಭಿಕ ಸಮಸ್ಯೆಗಳನ್ನು ಇನ್ನೆರಡು ತಿಂಗಳಲ್ಲಿ ಬಗೆಹರಿಸುವ ವಿಶ್ವಾಸವನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಕೆಲವು ಅಡೆತಡೆಗಳು, ತೊಂದರೆಗಳು ಬರುವುದು ಸಹಜ. ಆದರೆ ಅವುಗಳನ್ನು ಎರಡು ತಿಂಗಳಲ್ಲಿ ಬಗೆಹರಿಸುವ ಸಾಧ್ಯತೆಯಿದೆ ಎಂದು ಸುಬ್ರಹ್ಮಣ್ಯನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಜಿಎಸ್ ಟಿಯನ್ನು ವಿಚ್ಛಿದ್ರಕಾರಕ ಬದಲಾವಣೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಿದ್ದನ್ನು ಪ್ರಸ್ತಾಪಿಸಿದ ಅರವಿಂದ ಸುಬ್ರಹ್ಮಣ್ಯನ್,ಆರ್ಥಿಕತೆಯ ಬೆಳವಣಿಗೆಯ ಕ್ಷಣಗಳಿಗೆ ಯಾವುದೇ ಪರಿಣಾಮ ಬೀರದಂತೆ ಆರಂಭಿಕ ಹಂತದ ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಆರಂಭಿಕ ಹಂತದಲ್ಲಿರುವ ಕೆಲವು ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಗೆಹರಿಸಲು ನಿಶ್ಚಯಿಸಿವೆ ಎಂದು ಕೇಂದ್ರ ಜಾಗೃತ ಆಯುಕ್ತ ಕೆ.ವಿ. ಚೌಧರಿ ತಿಳಿಸಿದ್ದಾರೆ.ಜಿಎಸ್ ಟಿ ಒಂದು ಮುಖ್ಯವಾದ ನಡೆಯಾಗಿದ್ದು, ಇದು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಿ ವ್ಯಾಪಾರ ವಹಿವಾಟು ಸುಗಮವಾಗಲು ಸಹಾಯ ಮಾಡುತ್ತದೆ ಎಂದರು.
ಆದಾಯ ತಟಸ್ಥ ಜಿಎಸ್ ಟಿ ಎಂದು ಕೇಂದ್ರ ಸರ್ಕಾರ ಹೇಳಿಕೊಂಡು ಬಂದಿದ್ದು, ಇದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆದಾಯವಿಲ್ಲ ಎಂದರು.
ದೇಶದ ಆರ್ಥಿಕ ಬೆಳವಣಿಗೆಗೆ ಜಿಎಸ್ ಟಿ ಸಹಾಯವಾಗುತ್ತದೆಯೇ ಎಂದು ಕೇಳಿದ್ದಕ್ಕೆ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಕಾದು ನೋಡೋಣ. ಈ ಸಮಯದಲ್ಲಿ ಊಹಿಸುವುದು ಕಷ್ಟ ಎಂದು ಹೇಳಿದರು.