ವಾಣಿಜ್ಯ

15ನೇ ಹಣಕಾಸು ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Lingaraj Badiger
ನವದೆಹಲಿ: 15ನೇ ಹಣಕಾಸು ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಸಂಪನ್ಮೂಲಗಳನ್ನು ಸುಧಾರಿಸಿಕೊಳ್ಳಲು ಮತ್ತು ಹಣಕಾಸು ವಿಚಾರಗಳಲ್ಲಿ ರಾಜ್ಯಗಳ ಜತೆಗೆ ಚರ್ಚಿಸಿ ಸಲಹೆಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, 15ನೇ ಹಣಕಾಸು ಆಯೋಗ ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಆಯೋಗದ ಸದಸ್ಯರು ಹಾಗೂ ಅವರ ಅವಧಿ ಇತ್ಯಾದಿಗಳ ಬಗ್ಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು 2020ರ ಏಪ್ರಿಲ್‌ 1ರ ವೇಳೆಗೆ ಅನುಷ್ಠಾನಗೊಳಿಸಲಾಗುವುದು ಎಂದು ಜೇಟ್ಲಿ ತಿಳಿಸಿದರು. ಸಾಮಾನ್ಯವಾಗಿ ಆಯೋಗಕ್ಕೆ ಶಿಫಾರಸು ನೀಡಲು 2 ವರ್ಷ ಬೇಕಾಗುತ್ತದೆ.
ಭಾರತದ ಸಂವಿಧಾನ 280ನೇ ವಿಧಿ ಅನ್ವಯ ಕೇಂದ್ರ ಹಣಕಾಸು ಆಯೋಗವನ್ನು ಐದು ವರ್ಷದ ಅವಧಿಗೆ ರಚಿಸಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಈ ಆಯೋಗ ಶಿಫಾರಸು ಮಾಡುತ್ತದೆ.
SCROLL FOR NEXT