ವಾಣಿಜ್ಯ

ಹಗರಣ, ವಂಚನೆ, ಹಿಂಪಡೆಯದ ಸಾಲಗಳಿಂದ ನಲುಗುತ್ತಿರುವ ಸಾರ್ವಜನಿಕ ವಲಯ ಬ್ಯಾಂಕುಗಳು

Sumana Upadhyaya

ನವದೆಹಲಿ: 2014-15ರಲ್ಲಿ 45,743 ಕೋಟಿ ರೂಪಾಯಿಗಳ ನಿವ್ವಳ ಲಾಭ ತೋರಿಸಿದ್ದ ಸಾರ್ವಜನಿಕ ವಲಯ ಬ್ಯಾಂಕುಗಳು 2015-16ರಲ್ಲಿ 17,993 ಕೋಟಿ ರೂಪಾಯಿ ನಷ್ಟ ಕಂಡಿದೆ. ಕಳೆದ ವರ್ಷ ಡಿಸೆಂಬರ್ ವೇಳೆಗೆ ಈ ನಷ್ಟದ ಪ್ರಮಾಣ 23,984 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಈ ಮಟ್ಟದಲ್ಲಿ ಇಳಿಕೆಯಾಗಿರುವುದು ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಹಗರಣ, ಭಾರೀ ಅನುತ್ಪಾದಕ ಸಾಲಗಳು ಮತ್ತು ಆಸ್ತಿಗಳು, ವಂಚನೆಗಳು ಹೆಚ್ಚಾಗಲು ಕಾರಣವಾಗಿದೆ. ಖಾಸಗಿ ವಲಯ ಬ್ಯಾಂಕುಗಳು ಲಾಭ ಗಳಿಕೆಯಲ್ಲಿ ಮುಂದಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿಅಂಶ ಪ್ರಕಾರ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹೊರತುಪಡಿಸಿ ಭಾರತದ ಎಲ್ಲಾ 27 ಸಾರ್ವಜನಿಕ ವಲಯ ಬ್ಯಾಂಕುಗಳು 2014-15ರಲ್ಲಿ ಲಾಭವನ್ನು ಘೋಷಿಸಿಕೊಂಡಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಹೆಚ್ಚು 13,102 ಕೋಟಿ ರೂ ಲಾಭ ಮಾಡಿಕೊಂಡಿತ್ತು. ನಂತರದ ಸ್ಥಾನದಲ್ಲಿ ಸೆಂಟ್ರಲ್ ಬ್ಯಾಂಕ್ 6,950 ಕೋಟಿ ರೂಗಳಷ್ಟು ಸಂಪಾದಿಸಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ 3,062 ಕೋಟಿ ಲಾಭ ಮಾಡಿಕೊಂಡಿತ್ತು.

ಆದರೆ 2015-16ರಲ್ಲಿ ಈ ಎಲ್ಲಾ ಲಾಭ ಮಾಡಿಕೊಂಡಿದ್ದ ಬ್ಯಾಂಕುಗಳು ನಿವ್ವಳ 17,993 ಕೋಟಿ ರೂ ನಷ್ಟ ಮಾಡಿಕೊಂಡಿದ್ದವು. ಅವುಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು 6,089 ಕೋಟಿ ರೂ, ಬ್ಯಾಂಕ್ ಆಪ್ ಬರೋಡ 5,396 ಕೋಟಿ ರೂ ನಷ್ಟ ಮಾಡಿಕೊಂಡಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಕೆಲ ಬ್ಯಾಂಕುಗಳು ಮಾತ್ರ ಹಸಿರು ಪಟ್ಟಿಯಲ್ಲಿದ್ದವು.

ಆ ವರ್ಷ 9,951 ಕೋಟಿ ರೂ ಲಾಭ ಮಾಡಿಕೊಂಡಿತ್ತು. ಬೇರೆಲ್ಲಾ ಬ್ಯಾಂಕುಗಳು ಕೆಂಪು ಪಟ್ಟಿಯಲ್ಲಿದ್ದವು. 2016-17ರಲ್ಲಿ ನಷ್ಟದ ಮೊತ್ತ 11,389 ಕೋಟಿ ರೂಪಾಯಿಗಳಷ್ಟಾಗಿದ್ದವು. ಆದರೆ 2017-18ರಲ್ಲಿ ಈ ಎಲ್ಲಾ ದಾಖಲೆಗಳು ಮುರಿದು ಕಳೆದ ಡಿಸೆಂಬರ್ ಅಂತ್ಯಕ್ಕೆ ನಷ್ಟದ ಮೊತ್ತ 23,984 ಕೋಟಿ ರೂಪಾಯಿಗಳಷ್ಟಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಖಾಸಗಿ ಬ್ಯಾಂಕುಗಳು 2014-15ರಲ್ಲಿ 38,721 ಕೋಟಿ ರೂ  ಮತ್ತು ಕಳೆದ ಡಿಸೆಂಬರ್ ವೇಳೆಗೆ 34,308 ಕೋಟಿ ರೂಪಾಯಿ ಲಾಭ ತೋರಿಸಿವೆ.

2017-18ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಭಾರೀ ನಷ್ಟವಾಗಿದ್ದು ಗ್ರಾಹಕರಿಗೆ ನೀಡಿದ ಸಾಲ ವಾಪಸ್ ಬರದೆ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆರ್ ಬಿಐ ದಾಖಲೆಗಳ ಪ್ರಕಾರ, ಸಾರ್ವಜನಿಕ ವಲಯ ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳ ಪ್ರಮಾಣ 2,79, 016 ಕೋಟಿಯಿಂದ ಕಳೆದ ಎರಡು ವರ್ಷಗಳಲ್ಲಿ 7,87,120 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಇದಕ್ಕೆ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಹೆಚ್ಚಾಗುತ್ತಿರುವ ಹಗರಣ, ವಂಚನೆಗಳು ಕೂಡ ಕಾರಣವಾಗಿವೆ. ಆರ್ ಬಿಐ ದಾಖಲೆಗಳ ಪ್ರಕಾರ, 13,643 ವಂಚನೆ ಕೇಸುಗಳು ಕಳೆದ  5ವರ್ಷಗಳಲ್ಲಿ 52,717 ಕೋಟಿ ರೂಪಾಯಿಗಳಷ್ಟು ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ವಲಯ ಬ್ಯಾಂಕುಗಳಿಂದ ಹಣದ ಸೋರಿಕೆಯನ್ನು ತಡೆಗಟ್ಟಿ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಇಂದ್ರಧನುಷ್ ಯೋಜನೆಯನ್ನು ಆರಂಭಿಸಿತ್ತು.

SCROLL FOR NEXT