ವಾಣಿಜ್ಯ

ಬ್ಯಾಂಕುಗಳ ಅತಿಯಾದ ಆಶಾವಾದ ಮರುಪಾವತಿಯಾಗದ ಸಾಲಗಳಿಗೆ ಕಾರಣ: ರಘುರಾಮ್ ರಾಜನ್

Sumana Upadhyaya

ನವದೆಹಲಿ: ಮರುಪಾವತಿಯಾಗದ ಸಾಲಗಳು ಹೆಚ್ಚಾಗುತ್ತಿರುವುದಕ್ಕೆ ಬ್ಯಾಂಕುಗಳ ಅತಿಯಾದ ಆಶಾವಾದ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಆರ್ಥಿಕ ಬೆಳವಣಿಗೆಯಲ್ಲಿನ ಕುಂಠಿತತೆ ಮುಖ್ಯ ಕಾರಣವಾಗಿದೆ ಎಂದು ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುರಳಿ ಮನೋಹರ್ ಜೋಷಿ ನೇತೃತ್ವದ ಅಂದಾಜುಗಳ ಕುರಿತ ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ಅವರು, ಸರ್ಕಾರದ ಆಡಳಿತದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಸಂಶಯ ಉಂಟಾಗುತ್ತಿದೆ ಮತ್ತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದರಲ್ಲಿನ ನಿಧಾನಗತಿ ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ, ಅದು ಹಿಂದಿನ ಯುಪಿಎ ಸರ್ಕಾರ ಅವಧಿಯಲ್ಲಿ ಕೂಡ ಇತ್ತು ಮತ್ತು ಇಂದಿನ ಎನ್ ಡಿಎ ಅವಧಿಯಲ್ಲಿ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕುಗಳು ದೊಡ್ಡ ಸಾಲಗಳ ಮರುಪಾವತಿ ಬಗ್ಗೆ ಅಗತ್ಯ ಗಮನ ವಹಿಸುತ್ತಿಲ್ಲ. 2008ರ ಆರ್ಥಿಕ ಹಿಂಜರಿತ ಬಳಿಕ ತಮ್ಮ ಬೆಳವಣಿಗೆ ಬಗ್ಗೆ ಬ್ಯಾಂಕುಗಳ ಅಂದಾಜುಗಳು ಅವಾಸ್ತವಿಕವಾಗಿದ್ದವು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಸಮರ್ಪಕವಾಗಿ ಮರುಪಾವತಿಯಾಗದ ಸಾಲಗಳು ಅನುತ್ಪಾದಕ ಆಸ್ತಿಗಳಾಗುವುದನ್ನು ತಡೆಯಲು ಬ್ಯಾಂಕುಗಳು ಇನ್ನಷ್ಟು ಸಾಲಗಳನ್ನು ನೀಡಿದ್ದವು ಎಂದು ರಾಜನ್ ಸಮಿತಿಗೆ ತಿಳಿಸಿದ್ದರು ಎನ್ನಲಾಗಿದೆ.

ಆರ್ಥಿಕ ಬೆಳವಣಿಗೆ ಬಲಿಷ್ಟವಾಗಿದ್ದ 2006ರಿಂದ 2008ರವರೆಗೆ ಅತಿ ಹೆಚ್ಚಿನ ಪ್ರಮಾಣದ ಅನುತ್ಪಾದಕ ಮತ್ತು ಮರು ಪಾವತಿಯಾಗದ ಸಾಲಗಳು ಸೃಷ್ಟಿಯಾದವು. ಇಂತಹ ಸಮಯದಲ್ಲಿ ಬ್ಯಾಂಕುಗಳು ತಪ್ಪುಗಳನ್ನು ಮಾಡುತ್ತವೆ. ಆ ಸಮಯದಲ್ಲಿ ಭವಿಷ್ಯದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಬ್ಯಾಂಕುಗಳು ಕಡೆಗಣಿಸುತ್ತವೆ ಎಂದು ಪ್ರಸ್ತುತ ಅಮೆರಿಕಾದ ಚಿಕಾಗೊ ಬೂತ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ರಘುರಾಮ್ ರಾಜನ್ ಹೇಳಿದ್ದಾರೆ.

SCROLL FOR NEXT