ವಾಣಿಜ್ಯ

ಸ್ವಂತ ಅಭಿಪ್ರಾಯ ಹರಡುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ: ರಾಹುಲ್ ಬಜಾಜ್‌ಗೆ ನಿರ್ಮಲಾ ಸೀತಾರಾಮನ್

Lingaraj Badiger

ನವದೆಹಲಿ: ತಮ್ಮ ಸ್ವಂತ ಅಭಿಪ್ರಾಯವನ್ನು ಹರಡುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಜನ ಭಯ ಪಡುತ್ತಿದ್ದಾರೆ ಎಂದ ಉದ್ಯಮಿ ಹಾಗೂ ಬಜಾಜ್ ಸಮೂಹದ ಅಧ್ಯಕ್ಷ ರಾಹುಲ್ ಬಜಾಜ್ ಅವರಿಗೆ ಸೋಮವಾರ ತೀರುಗೇಟು ನೀಡಿದ್ದಾರೆ.

ರಾಹುಲ್ ಬಜಾಜ್ ಅವರು ಎತ್ತಿದ ವಿಷಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಶ್ನೆಗಳು, ಟೀಕೆಗಳು ಕೇಳಿಬರುತ್ತವೆ, ಅವುಗಳಿಗೆ ಉತ್ತರಿಸಲಾಗುತ್ತದೆ, ಅವುಗಳನ್ನು ಅಂಡರ್ಲೈನ್ ​​ಮಾಡಲಾಗಿದೆ. ಇಂತಹ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ. ತಮ್ಮ ಸ್ವಂತ ಅಭಿಪ್ರಾಯವನ್ನು ಹರಡುವ ಬದಲು ಉತ್ತರಗಳನ್ನು ಪಡೆಯುವ ಉತ್ತಮ ಮಾರ್ಗಗಳಿವೆ ಎಂದು ಹಣಕಾಸು ಸಚಿವೆ ಟ್ವೀಟ್ ಮಾಡಿದ್ದಾರೆ.

ನಿನ್ನೆ ಮುಂಬೈನಲ್ಲಿ ನಡೆದ ದಿ ಎಕನಾಮಿಕ್ ಟೈಮ್ಸ್ 'ಇಟಿ ಅವಾರ್ಡ್ಸ್ 2019' ಕಾರ್ಯಕ್ರಮದಲ್ಲಿ ಉದ್ಯಮಿ ಬಜಾಜ್ ಈ ಮಾತನ್ನಾಡಿದ್ದು, ಈ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಹ ಉಪಸ್ಥಿತರಿದ್ದರು.

ಯುಪಿಎ- 2 ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಆಗದ ವಾತಾವರಣ ನಿರ್ಮಾಣವಾಗಿದೆ. ಒಂದೊಮ್ಮೆ ನಿಂದಿಸಿದ್ದಾದರೆ ನೀವು ನಮ್ಮನ್ನು ಪ್ರಶಂಸಿಸುತ್ತೀರಿ ಎನ್ನುವ ಯಾವ ಭರವಸೆಯೂ ಇಲ್ಲ. ನನ್ನ ತಪ್ಪು ಕಲ್ಪನೆ ಇದಾಗಲಿಕ್ಕೂ ಸಾಕು. ಆದರೆ ಉದ್ಯಮ ವಲಯದ ಬಹುತೇಕರು ಹೀಗೆಂದು ಭಾವಿಸಿದ್ದಾರೆ ಎಂದು ಬಜಾಜ್ ಹೇಳಿದ್ದರು.

ರಾಹುಲ್ ಬಜಾಜ್ ಅವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಅದೇ ಸಭೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ ಸಹ ಉತ್ತರಿಸಿದ್ದಾರೆ. "ಸರ್ಕಾರದ ವಿರುದ್ಧ ಟೀಕಿಸಲು ಯಾರೂ ಭಯಪಡುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿ ಅಸ್ತಿತ್ವದಲ್ಲಿದ್ದರೆ ಅದನ್ನು ಸುಧಾರಿಸಲು ಆಡಳಿತವು ಕೆಲಸ ಮಾಡುತ್ತದೆ. ನಮ್ಮ ಸರ್ಕಾರ ಪಾರದರ್ಶಕವಾಗಿದೆ, ವಿರೋಧದ ಬಗೆಗೆ ಆತಂಕವಿಲ್ಲ ಎಂದು ಹೇಳಿದ್ದರು.

SCROLL FOR NEXT