ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮುಂಬೈ: ದೇಶದ ಮುಂಚೂಣಿಯ ಸಾರ್ವಜನಿಕ ವಲಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ 1ರಿಂದ ಎಲ್ಲಾ ಚಿಲ್ಲರೆ ದೀರ್ಘಾವಧಿಯ ಠೇವಣಿಗಳು, ಅಲ್ಪಾವಧಿ ಮತ್ತು ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಲಿದೆ.
ಬಡ್ಡಿದರ ಇಳಿಕೆ ಮತ್ತು ಬ್ಯಾಂಕಿಗೆ ಬರುವ ಹಣದ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದ್ದು, ಇತರ ಸಾರ್ವಜನಿಕ ವಲಯ ಬ್ಯಾಂಕ್ ಗಳು ಕೂಡ ಇದನ್ನು ಅನುಸರಿಸುವ ಸಾಧ್ಯತೆಯಿದೆ.
7 ದಿನಗಳಿಂದ 179 ದಿನಗಳ ಅವಧಿಗೆ ಠೇವಣಿಯಿಡುವ ಹಣದ ಮೇಲೆ 50ರಿಂದ 75 ಬೇಸಿಕ್ ಪಾಯಿಂಟ್ ಗಳ(ಬಿಪಿಎಸ್) ಬಡ್ಡಿದರ ಕಡಿತವಾಗಲಿದೆ. ಚಿಲ್ಲರೆ ದೀರ್ಘಾವಧಿ ಮೇಲಿನ ಠೇವಣಿ ದರ 20 ಬಿಪಿಎಸ್ ಕಡಿಮೆಯಾಗಲಿದೆ. ಇನ್ನು 2 ಕೋಟಿ ರೂಪಾಯಿ ಸ್ಥಿರ ಠೇವಣಿ ಮೇಲಿನ ಬಡ್ಡಿದರ 35 ಬಿಪಿಎಸ್ ನಷ್ಟು ಕಡಿತವಾಗಲಿದೆ. ಹೊಸ ಬಡ್ಡಿದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
5ರಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿಯಾಗುವ ಸ್ಥಿರ ಠೇವಣಿ ಮೇಲಿನ ಬಡ್ಡಿದರ 10 ಬಿಪಿಎಸ್ ನಷ್ಟು ಇಳಿಕೆಯಾಗಿ ಗ್ರಾಹಕರಿಗೆ ಶೇಕಡಾ 6.5ರಷ್ಟು ಬಡ್ಡಿ ಸಿಗಲಿದೆ.
ಎಸ್ ಬಿಐಯ ದರಕ್ಕೆ ಹೋಲಿಕೆ ಮಾಡಿದರೆ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್ಎಸ್ ಸಿ 113 ತಿಂಗಳ ಠೇವಣಿ ಮೇಲೆ ಶೇಕಡಾ 7.9ರಷ್ಟು, ಕಿಸಾನ್ ವಿಕಾಸ್ ಪತ್ರ ಶೇಕಡಾ 7.6 ಬಡ್ಡಿ ನೀಡುತ್ತವೆ. ಇಲ್ಲಿ ಹೆಚ್ಚು ಬಡ್ಡಿ ಸಿಗುವುದರಿಂದ ಗ್ರಾಹಕರು ಇಲ್ಲಿ ಹೂಡಿಕೆ ಮಾಡುವುದು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಎಸ್ ಬಿಐ ಬಡ್ಡಿದರ ಕಡಿತ ಘೋಷಣೆ ಮಾಡುವ ಮುನ್ನ ಬ್ಯಾಂಕ್ ಆಫ್ ಬರೋಡಾ ಠೇವಣಿ ದರವನ್ನು 25 ಬಿಪಿಎಸ್ ನಷ್ಟು ಕಡಿತಗೊಳಿಸಿದೆ. ಅದರ ಒಂದು ವರ್ಷದ ಮತ್ತು 5ರಿಂದ 10 ವರ್ಷಗಳ ಮೇಲಿನ ಮೊತ್ತದ ಬಡ್ಡಿದರ ಶೇಕಡಾ 6.45ರಷ್ಟಿದೆ.
ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿದರೆ ಹೆಚ್ಚು ಪರಿಣಾಮ ಬೀರುವುದು ಹಿರಿಯ ನಾಗರಿಕರ ಮೇಲೆ. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು, ಎಲ್ ಐಸಿಯ ಪ್ರಧಾನ ಮಂತ್ರಿ ವಯ ವಂದನ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಅವುಗಳಿಂದ ಶೇಕಡಾ 8ರಷ್ಟು ಬಡ್ಡಿ ದೊರಕಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos