ನವದೆಹಲಿ; ಬ್ಯಾಂಕು ವಿಲೀನ, ಠೇವಣಿ ದರ ಇಳಿಕೆ ವಿರೋಧಿಸಿ ಮತ್ತು ಉದ್ಯೋಗ ಭದ್ರತೆಗೆ ಕರೆ ನೀಡಿ ಎರಡು ಬ್ಯಾಂಕು ಒಕ್ಕೂಟಗಳು ಇದೇ 22ರಂದು ಮುಷ್ಕರ ನಡೆಸಲು ಸಜ್ಜಾಗಿರುವುದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಅಂದು ವ್ಯತ್ಯಯವಾಗುವ ಸಾಧ್ಯತೆಯಿದೆ.
ಅಖಿಲ ಭಾರತ ಬ್ಯಾಂಕು ಉದ್ಯೋಗಿಗಳ ಸಂಘ ಮತ್ತು ಭಾರತೀಯ ಬ್ಯಾಂಕು ಉದ್ಯೋಗಿಗಳ ಫೆಡರೇಶನ್ (ಬಿಇಎಫ್ಐ), ಭಾರತೀಯ ಬ್ಯಾಂಕು ಅಸೋಸಿಯೇಷನ್ ಗೆ ಮಾಹಿತಿ ನೀಡಿ ಅಕ್ಟೋಬರ್ 22ರಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ನಡೆಸುವುದಾಗಿ ಹೇಳಿದೆ.
ಮುಷ್ಕರದಲ್ಲಿ ನಿರತವಾಗುವ ಸಂಘಟನೆಗಳಿಗೆ ತಮ್ಮ ಬ್ಯಾಂಕಿನ ಬಹುತೇಕ ನೌಕರರು ಸದಸ್ಯರಾಗಿಲ್ಲದಿರುವುದರಿಂದ ಇದರ ಪರಿಣಾಮ ಕಡಿಮೆಯಿರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದೆ.