ಮುಂಬೈ: ತೀವ್ರ ಕುಸಿತ ಕಂಡಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೆಲವು ಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದ ಕೂಡಲೇ ದೇಶೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಹಠಾತ್ ಏರಿಕೆ ಕಂಡುಬಂದಿದೆ.
ವಾರಾಂತ್ಯವಾದ ಇಂದು ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 1300 ಅಂಕಗಳಷ್ಟು ಏರಿಕೆ ಕಂಡುಬಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ತೆರಿಗೆ ಕಡಿತ ನಿರ್ಧಾರ ಪ್ರಕಟಿಸುತ್ತಿದ್ದಂತೆ ಷೇರುಗಳ ಸೂಚ್ಯಂಕವು ಇಂದು ಬೆಳಗ್ಗೆ 11.20ಕ್ಕೆ 1326.65 ಪಾಯಿಂಟ್ ಅಥವಾ ಶೇಕಡಾ 3.68 ರಷ್ಟು ಏರಿಕೆಯಾಗಿ ಸಂವೇದಿ ಸೂಚ್ಯಂಕ 37,420.12 ಕ್ಕೆ ತಲುಪಿದ್ದರೆ, ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕವಾದ ನಿಫ್ಟಿ 362.95 ಪಾಯಿಂಟ್ಗಳು ಅಥವಾ 3.39 ಶೇಕಡಾ ಏರಿಕೆಯಾಗಿ 11,067.75 ರಲ್ಲಿ ವಹಿವಾಟು ನಡೆಸಿದೆ.
ಇತ್ತೀಚಿನ ವರದಿ ಬಂದಾಗ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 1734 ಅಂಕ ಏರಿಕೆ ಕಂಡು 37 ಸಾವಿರದ 828ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 512 ಅಂಕ ಏರಿಕೆ ಕಂಡು 11 ಸಾವಿರದ 217ರಲ್ಲಿ ವಹಿವಾಟು ನಡೆಸುತ್ತಿತ್ತು.
ಮಾರುತಿ, ಎಂ ಅಂಡ್ ಎಂ, ಹೆಚ್ ಡಿಎಫ್ ಸಿ ಬ್ಯಾಂಕು, ಟಾಟಾ ಮೋಟಾರ್ಸ್, ಯಸ್ ಬ್ಯಾಂಕ್, ಟಾಟಾ ಸ್ಟೀಲ್, ಎಲ್ ಅಂಡ್ ಟಿ, ಐಸಿಐಸಿಐ ಬ್ಯಾಂಕು. ಬಜಾಜ್ ಅಟೋ ಅಂಡ್ ಆರ್ ಆಎಲ್ ಕಂಪೆನಿಗಳ ಷೇರು ಬೆಲೆ ಶೇಕಡಾ 9ಕ್ಕೆ ಹೆಚ್ಚಿಗೆಯಾಗಿತ್ತು.
ಇನ್ನೊಂದೆಡೆ ಭಾರತೀಯ ರೂಪಾಯಿ ಮೌಲ್ಯ ಕೂಡ 66 ಪೈಸೆ ಏರಿಕೆಯಾಗಿ ಪ್ರತಿ ಡಾಲರ್ ಎದುರು ರೂಪಾಯಿ ಬೆಲೆ 70 ರೂಪಾಯಿ 68 ಪೈಸೆಯಾಗಿತ್ತು.
ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕಳೆದ ಬಾರಿ ಬಜೆಟ್ ನಲ್ಲಿ ಜಾರಿಗೆ ತಂದ ದೇಶೀಯ ಕಂಪೆನಿಗಳ ಮೇಲೆ ಹೆಚ್ಚುವರಿ ಶುಲ್ಕವನ್ನು ಹೊರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಂಪೆನಿಗಳಲ್ಲಿ ಈಕ್ವೆಟಿ ಷೇರುಗಳ ಮಾರಾಟದಿಂದ ಉಂಟಾಗುವ ಬಂಡವಾಳ ಲಾಭದ ಮೇಲೆ ಕಂಪೆನಿಗಳಿಗೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ.
ವಿದೇಶಿ ಬಂಡವಾಳ ಹೂಡಿಕೆದಾರರ ಉತ್ಪನ್ನಗಳು ಸೇರಿದಂತೆ ಯಾವುದೇ ಭದ್ರತೆಯ ಮಾರಾಟದಿಂದ ಬಂಡವಾಳದ ಲಾಭದ ಮೇಲೆ ಸೂಪರ್-ರಿಚ್ ತೆರಿಗೆ ಅನ್ವಯಿಸುವುದಿಲ್ಲ.