ವಾಣಿಜ್ಯ

ಲಾಕ್ ಡೌನ್ ಆರ್ಥಿಕ ಹಿಂಜರಿತದ ಭೀತಿ ಮಧ್ಯೆ ಮೋದಿ ಸರ್ಕಾರದಿಂದ ಪ್ರೋತ್ಸಾಹಕ ಪ್ಯಾಕೇಜ್?

Sumana Upadhyaya

ನವದೆಹಲಿ: ಕೊರೋನಾ ವೈರಸ್ ಸೋಂಕು ತಗುಲಿ ಅದು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾದ ನಂತರ ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಲು ನಿನ್ನೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಲಾಕ್ ಡೌನ್ ನಿಂದಾಗಿ ತೀವ್ರ ದುಸ್ಥಿತಿ ಎದುರಿಸುತ್ತಿರುವ ವಲಯಗಳಿಗೆ ಪ್ರೋತ್ಸಾಹಕ ಪ್ಯಾಕೇಜ್ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಿಮಾನಯಾನ, ಹೊಟೇಲ್, ಎಂಎಸ್ ಎಂಇ ಮತ್ತು ರಫ್ತು ವಲಯಗಳಲ್ಲಿ ಬೃಹತ್ ಮಟ್ಟದಲ್ಲಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ.

ವೈರಸ್ ಲಾಕ್ ಡೌನ್ ನಿಂದ ಆಗಿರುವ ಪರಿಣಾಮದ ಬಗ್ಗೆ ಆರ್ಥಿಕ ಕಾರ್ಯಪಡೆ ರಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಲಾಕ್ ಡೌನ್ ನಿಂದ ಆದ ಪ್ರಾಥಮಿಕ ಪರಿಣಾಮ ಕುರಿತು ಪ್ರಧಾನ ಮಂತ್ರಿಗಳಿಗೆ ವಿತ್ತ ಸಚಿವೆ ವಿವರಿಸಿದರು. ಹಣಕಾಸು ವಲಯದ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಯಿತು. ಹಲವು ವಲಯಗಳ ಮೇಲೆ ಮುಂಬರುವ ದಿನಗಳಲ್ಲಿ ಆಗುವ ಪರಿಣಾಮ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕುಸಿದ ಜಿಡಿಪಿ ದರ ಮತ್ತು ಇಲ್ಲಿಯವರೆಗೆ ಘೋಷಿಸಲಾದ ಪರಿಹಾರ ಪ್ಯಾಕೇಜ್ ಗಳಲ್ಲಿ ಆದ ಪ್ರಗತಿ ಕುರಿತು ಸಹ ಚರ್ಚೆ ನಡೆಸಲಾಯಿತು. ಕಳೆದ ವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ಜಿಡಿಪಿ ಅಭಿವೃದ್ಧಿ ದರವನ್ನು ಕಡಿತಗೊಳಿಸಿದ್ದವು.

SCROLL FOR NEXT