ವಾಣಿಜ್ಯ

ಅಗ್ನಿಪಥ್ ಯುವಕರಿಗೆ ಒಂದು ಉತ್ತಮ ಅವಕಾಶ; ಇನ್ಫೋಸಿಸ್ ಆಯ್ಕೆ ಮಾನದಂಡಗಳನ್ನು ಅನುಸರಿಸುತ್ತದೆ: ನಂದನ್ ನಿಲೇಕಣಿ

Lingaraj Badiger

ನವದೆಹಲಿ: ಭಾರತದಲ್ಲಿ ಯುವಕರಿಗೆ ಅವಕಾಶಗಳನ್ನು ಒದಗಿಸುವ ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಅವರು ಶ್ಲಾಘಿಸಿದ್ದು, ಇದು ಯುವಕರಿಗೆ ಒಂದು ಉತ್ತಮ ಅವಕಾಶ ಎಂದು ಶನಿವಾರ ಹೇಳಿದ್ದಾರೆ. ಆದರೆ ಅಗ್ನಿವೀರರ ನೇಮಕಾತಿ ವಿಚಾರದಲ್ಲಿ ಇನ್ಫೋಸಿಸ್ ತನ್ನದೇ ಆದ ಆಯ್ಕೆ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ತಿಳಿಸಿದ್ದಾರೆ.

ಇಂದು 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಿಲೇಕಣಿ, ಕೇಂದ್ರ ಸರ್ಕಾರ ಪರಿಚಯಿಸಿದ ಅಗ್ನಿವೀರ್ ಯೋಜನೆಯ ಸಾಮರ್ಥ್ಯವನ್ನು ಇನ್ಫೋಸಿಸ್ ಗುರುತಿಸುತ್ತದೆ. ಇದು ಯುವಕರಿಗೆ ಅತ್ಯಂತ ಶಿಸ್ತಿನ ವಾತಾವರಣದಲ್ಲಿ ವೃತ್ತಿಜೀವನ ಪ್ರಾರಂಭಿಸಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಭವಿಷ್ಯದ ವೃತ್ತಿಜೀವನಕ್ಕೆ ಕೌಶಲ್ಯಗಳನ್ನು ನಿರ್ಮಿಸಲು ಅಗ್ನಿಪಥ್ ಯೋಜನೆ ಸಹಾಯ ಮಾಡುತ್ತದೆ. ಇನ್ಫೋಸಿಸ್ ಸಹ ಯಾವಾಗಲೂ ಕೌಶಲ್ಯವನ್ನು ವೃದ್ಧಿಸಲು ಬಯಸುತ್ತದೆ ಮತ್ತು ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ನಾವು ನಮ್ಮದೆ ಆದ ಸ್ಥಾಪಿತ ನಿಯಮಗಳನ್ನು ಅನುಸರಿಸುತ್ತೇವೆ ಎಂದು ನಿಲೇಕಣಿ ತಿಳಿಸಿದ್ದಾರೆ.

ಇನ್ಫೋಸಿಸ್ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುತ್ತದೆಯೇ? ಎಂಬ ಷೇರುದಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಲೇಕಣಿ, ನೇಮಕಾತಿಗೆ ಸಂಬಂಧಿಸಿದಂತೆ ನಮ್ಮದೇ ಆದ ನಿಯಮಾವಳಿಗಳಿವೆ ಎಂದು ಉತ್ತರಿಸಿದ್ದಾರೆ.

ಇನ್ಫೋಸಿಸ್ ಜಗತ್ತಿನಾದ್ಯಂತ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ ಶೇ. 39.6 ರಷ್ಟು ಮಹಿಳೆಯರಿದ್ದಾರೆ ಎಂದು ನಿಲೇಕಣಿ ಹೇಳಿದ್ದಾರೆ.

SCROLL FOR NEXT