ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಅಟ್ ಲೀಸ್ಟ್... ಇದು ಕಪ್ಪು ಹಣ ಅಲ್ಲ: ಚುನಾವಣಾ ಬಾಂಡ್‌ ಬಗ್ಗೆ ನಿರ್ಮಲಾ ಸೀತಾರಾಮನ್

Lingaraj Badiger

ನವದೆಹಲಿ: ಚುನಾವಣಾ ಬಾಂಡ್ ಯೋಜನೆಯ ದತ್ತಾಂಶಗಳನ್ನು ಬಿಡುಗಡೆ ಮಾಡಿದ ನಂತರ ಭಾರಿ ವಿವಾದ ಸೃಷ್ಟಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆಯು ಪರಿಪೂರ್ಣವಾಗಿಲ್ಲದಿದ್ದರೂ, ಹಿಂದಿನ ರಾಜಕೀಯ ಫಂಡ್ ವ್ಯವಸ್ಥೆಗಿಂತ "ಸ್ವಲ್ಪ ಉತ್ತಮವಾಗಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.

"ಚುನಾವಣಾ ಬಾಂಡ್ ವ್ಯವಸ್ಥೆಯು ಪರಿಪೂರ್ಣವಾಗಿಲ್ಲದಿರಬಹುದು. ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಾವು ಪಾಠ ಕಲಿಯಬೇಕು. ಇದರ ಸುತ್ತಲೂ ಹೊಸ ಕಾನೂನು ತರಬಹುದು ಅಥವಾ ತರದೆ ಇರಬಹುದು. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ಸೀತಾರಾಮನ್ ಇಂದು ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಹೇಳಿದ್ದಾರೆ.

ಕಂಪನಿಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ನಂತರ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸೀತಾರಾಮನ್, "ಜಾರಿ ನಿರ್ದೇಶನಾಲಯದ ದಾಳಿ ನಡೆದ ನಂತರ ಹಣವನ್ನು ನೀಡಲಾಗಿದೆ" ಎಂಬುದು ಕೇವಲ ಊಹೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್‌ಗಳ ಡೇಟಾವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದು, ಆಯೋಗ ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಚುನಾವಣಾ ಆಯೋಗ ಅಪ್‌ಲೋಡ್ ಮಾಡಿದ ಡೇಟಾ ಪ್ರಕಾರ, ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರು ನಿರ್ದೇಶಕರಾಗಿರುವ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು ಎಂಬ ಕಂಪನಿ 1368 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಮೂಲಕ ಅತಿ ಹೆಚ್ಚು ಚುನಾವಣಾ ಬಾಂಡ್‌ಗಳ ಖರೀದಿದಾರರಾಗಿದ್ದಾರೆ.

SCROLL FOR NEXT