ಮುಂಬೈ: ಕೆಲಸ ಮಾಡುವ ಅವಧಿ ಹೆಚ್ಚಿಸುವ ಕುರಿತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಎಲ್ ಅಂಡ್ ಟಿ ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯನ್ ಅವರ ಹೇಳಿಕೆಗಳು ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆ ಇದಕ್ಕೆ ತಿರುಗೇಟು ನೀಡಿರುವ ಖ್ಯಾತ ಉದ್ಯಮಿ ಆನಂದ್ ಮಹಿಂದ್ರ ಹೆಚ್ಚುವರಿ ಕೆಲಸದ ಅವಧಿ ಪ್ರಸ್ತಾಪವನ್ನೇ ವಿರೋಧಿಸಿದ್ದಾರೆ.
ಹೌದು.. ದೇಶದಲ್ಲಿ ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧದ ಮಾತುಗಳಾದವು.
ಇದರ ನಡುವೆ ದೇಶದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಎಲ್ & ಟಿಯ ಚೇರ್ಮನ್ ಎಸ್ಎನ್ ಸುಬ್ರಹ್ಮಣ್ಯನ್ ಕೂಡ ನಾರಾಯಣ ಮೂರ್ತಿ ಹೇಳಿಕೆಗೆ ಬೆಂಬಲ ನೀಡಿದ್ದು ಮಾತ್ರವಲ್ಲದೇ.. ಇತ್ತೀಚೆಗೆ ಅವರು ಕಂಪನಿಯ ಆಂತರಿಕ ಸಭೆಯಲ್ಲಿ ಆಡಿರುವ ಮಾತುಗಳು ದೇಶದ ಜನರ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ತಮ್ಮ ಅಭಿಪ್ರಾಯ ಎಂದು ಅವರು, ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಅನ್ನೋದರ ಬಗ್ಗೆ ವಿಷಾದವಿದೆ ಎಂದಿದ್ದಾರೆ. ಅಲ್ಲದೆ ಉದ್ಯೋಗಿಗಳನ್ನು ಉಲ್ಲೇಖಿಸಿ ಭಾನುವಾರ ಎಷ್ಟೂ ಅಂತಾ ಹೆಂಡ್ತಿಯ ಮುಖವನ್ನು ನೋಡುತ್ತಾ ಇರುತ್ತೀರಿ ಎಂದು ಹೇಳಿದ್ದರು.
ಸುಬ್ರಹ್ಮಣ್ಯನ್ ಅವರ ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಬಂಡವಾಳದಾರರಲ್ಲೇ ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೆಕ್ ಮಹಿಂದ್ರಾ ಮತ್ತು ಮಹಿಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರ, ಹೆಚ್ಚುವರಿ ಕೆಲಸದ ಅವಧಿಯ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
'ನೀವು ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಅನ್ನೋ ಪ್ರಶ್ನೆಗೆ, 'ನಾನು ಈ ಪ್ರಶ್ನೆಯನ್ನು ಯಾವಾಗಲೂ ಅವಾಯ್ಡ್ ಮಾಡಲು ಬಯಸುತ್ತೇನೆ. ಎಷ್ಟು ಸಮಯ ಕೆಲಸ ಮಾಡುತ್ತೀರಿ ಅನ್ನೋದು ನನಗೆ ಯಾವತ್ತಿಗೂ ಪ್ರಶ್ನೆಯಲ್ಲ. ನನ್ನ ವರ್ಕ್ ಎಷ್ಟು ಕ್ವಾಲಿಟಿಯಲ್ಲಿತ್ತು ಅನ್ನೋದೇ ಮುಖ್ಯ. ನಾನು ಎಷ್ಟು ಗಂಟೆ ಕೆಲಸ ಮಾಡುತ್ತೀನಿ ಅನ್ನೋ ಪ್ರಶ್ನೆಗಳನ್ನ ಕೇಳಬೇಡಿ. 10 ಗಂಟೆಗಳಲ್ಲಿ ಪ್ರಪಂಚವನ್ನೇ ಬದಲಿಸಬಹುದು. ಎಷ್ಟೊತ್ತು ಕೆಲಸ ಮಾಡಿದ್ವಿ ಅನ್ನೋದು ಮುಖ್ಯವಲ್ಲ.. ಎಷ್ಟು ಗುಣಮಟ್ಟದ ಕೆಲಸ ಮಾಡಿದ್ವಿ ಅನ್ನೋದು ಮುಖ್ಯ ಎಂದು ಹೇಳಿದ್ದಾರೆ.
ಅಂತೆಯೇ ನೀವು ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಎಷ್ಟು ಗಂಟೆಯನ್ನು ಕಳೆಯುತ್ತೀರಿ ಎನ್ನುವ ಪ್ರಶ್ನೆಗೆ, 'ನಾನು ಒಮ್ಮೊಮ್ಮೆ ನನ್ನಲ್ಲೇ ಈ ಪ್ರಶ್ನೆ ಕೇಳುತ್ತಿರುತ್ತೇನೆ. ನನ್ನ ಟ್ವೀಟ್ಅನ್ನು ನೋಡಿದವರಿಗೆ ಗೊತ್ತಿರುತ್ತದೆ. ನನಗೆ ಕಚೇರಿಯಲ್ಲಿ ಅದ್ಭುತವಾದ ಟೀಮ್ ಇದೆ. ಅವರು ನನ್ನ ತಲೆಯಲ್ಲೇ ಉಳಿದುಕೊಂಡು ಬಿಟ್ಟಿದ್ದಾರೆ. ನೀವ್ಯಾಕೆ ಟ್ವಿಟರ್ನಲ್ಲಿದ್ದೀರಿ, ಕೆಲಸ ಮಾಡಿ ಅನ್ನೋ ಕಾಮೆಂಟ್ಗಳು ಬರುತ್ತಲೇ ಇರುತ್ತದೆ. ಒಂದು ವಿಚಾರ ಇಲ್ಲಿ ತಿಳಿಸುತ್ತೇನೆ. ನನಗೆ ಏಕಾಂಗಿತನ ಕಾಡುತ್ತಿದ್ದೆ ಅನ್ನೋ ಕಾರಣಕ್ಕಾಗಿ ನಾನು ಎಕ್ಸ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮನೆಯಲ್ಲಿ ಸುಂದರ ಹೆಂಡತಿ ಇದ್ದಾಳೆ
ಇದೇ ವೇಳೆ ನನಗೆ ಸುಂದರವಾದ ಹೆಂಡತಿಯಿದ್ದಾಳೆ. ಆಕೆಯನ್ನು ದಿಟ್ಟಿಸಿ ನೋಡೋದು ನನಗೆ ಖುಷಿ ಕೊಡುತ್ತದೆ. ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ. ನಾನು ಅಲ್ಲಿ ಸ್ನೇಹಿತರಲ್ಲಿ ಮಾಡಿಕೊಳ್ಳುವ ಸಲುವಾಗಿ ಇಲ್ಲ. ಆದರೆ, ಎಕ್ಸ್ ಒಂದು ಅಮೇಜಿಂಗ್ ಬ್ಯುಸಿನೆಸ್ ಟೂಲ್ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದೊಂದೇ ಫ್ಲಾಟ್ಫಾರ್ಮ್ನಿಂದ ನನಗೆ 11 ಮಿಲಿಯನ್ ಜನರಿಂದ ಫೀಡ್ಬ್ಯಾಕ್ ಬರುತ್ತದೆ' ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.