ಮುಂಬೈ (ಮಹಾರಾಷ್ಟ್ರ): ಐಡಿಬಿಐ ಬ್ಯಾಂಕ್ನ (IDBI Bank) ಖಾಸಗೀಕರಣದ (Privatization) ವಿರುದ್ಧ ಬ್ಯಾಂಕಿನ ನೌಕರರು ಹೋರಾಟಕ್ಕೆ ಮುಂದಾಗಿದ್ದು, ಜುಲೈ 27, 2026 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆ ಕುರಿತ ವರದಿ ಇಲ್ಲಿದೆ:
ಬ್ಯಾಂಕಿನ ಖಾಸಗೀಕರಣ ಯಾಕೆ?
ವಿದೇಶಿ ನೇರ ಹೂಡಿಕೆಗಾಗಿ, ಕೇಂದ್ರ ಸರ್ಕಾರ ಕೆನಡಾ ಮೂಲದ ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಗೆ ಐಡಿಬಿಐ ಬ್ಯಾಂಕ್ನ ಶೇಕಡಾ 60 ಕ್ಕಿಂತ ಹೆಚ್ಚಿನ ಷೇರನ್ನು ಸುಮಾರು $5.5 ಬಿಲಿಯನ್ ಡಾಲರ್ಗೆ ಮಾರಾಟ ಮಾಡಲು ಮುಂದಾಗಿದೆ. ಇದು ಯಶಸ್ವಿಯಾದರೆ, ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ ಎನಿಸಿಕೊಳ್ಳಲಿದೆ.
ಖಾಸಗೀಕರಣಕ್ಕೆ ನೌಕರರ ವಿರೋಧವೇಕೆ?
ಬ್ಯಾಂಕ್ ನೌಕರರ ಸಂಘಟನೆಗಳ ಪ್ರಕಾರ, ಕಳೆದ ಆರು ವರ್ಷಗಳಿಂದ ಐಡಿಬಿಐ ಬ್ಯಾಂಕ್ ನಿರಂತರವಾಗಿ ಲಾಭ ಗಳಿಸುತ್ತಿದೆ. ಹೀಗಿರುವಾಗ ಲಾಭದಲ್ಲಿರುವ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸುವುದು ಎಷ್ಟು ಸಮರ್ಥನೀಯ ಎನ್ನುವುದು ಅವರ ಪ್ರಶ್ನೆಯಾಗಿದೆ. ಇದರೊಂದಿಗೆ ಖಾಸಗೀಕರಣದಿಂದಾಗಿ ನೌಕರರ ಉದ್ಯೋಗ ಭದ್ರತೆ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಗೆ ಧಕ್ಕೆಯಾಗಬಹುದು ಎಂಬ ಆತಂಕ ನೌಕರರನ್ನು ಕಾಡುತ್ತಿದೆ.
ಮತ್ತೊಂದು ಪ್ರಮುಖ ಕಾರಣವೆಂದರೆ ಮೀಸಲಾತಿ ನಿಯಮಗಳ ಉಲ್ಲಂಘನೆಯ ಭೀತಿ. ಪ್ರಸ್ತುತ ಐಡಿಬಿಐ ಬ್ಯಾಂಕಿನಲ್ಲಿ ಪರಿಶಿಷ್ಟ ಜಾತಿಯ 3,000 ಕ್ಕೂ ಹೆಚ್ಚು, ಪರಿಶಿಷ್ಟ ಪಂಗಡದ 1,200 ಕ್ಕೂ ಹೆಚ್ಚು, ಹಿಂದುಳಿದ ವರ್ಗಗಳ 5,600 ಕ್ಕೂ ಹೆಚ್ಚು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮತ್ತು ಅಂಗವಿಕಲ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗೀಕರಣದ ನಂತರ ಈ ಮೀಸಲಾತಿ ಮಾನದಂಡಗಳು ಅನ್ವಯಿಸುವುದಿಲ್ಲ ಎಂಬ ಭಯ ನೌಕರರಲ್ಲಿದೆ.
ಗ್ರಾಹಕರ ಮೇಲಾಗುವ ಪರಿಣಾಮಗಳೇನು?
ಜುಲೈ 27 ರಂದು ನಡೆಯಲಿರುವ ಈ ಮುಷ್ಕರದಿಂದಾಗಿ ಬ್ಯಾಂಕ್ ಶಾಖೆಗಳಲ್ಲಿ ನಗದು ಠೇವಣಿ, ಹಣ ಹಿಂಪಡೆಯುವಿಕೆ ಮತ್ತು ಚೆಕ್ ಕ್ಲಿಯರೆನ್ಸ್ನಂತಹ ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಅಥವಾ ಅಡ್ಡಿಯಾಗಬಹುದು. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಆಪ್ಗಳು ಮತ್ತು ಡಿಜಿಟಲ್ ವಹಿವಾಟುಗಳ ಸೇವೆಗಳು ಎಂದಿನಂತೆ ಲಭ್ಯವಿರಲಿವೆ ಎಂದು ತಿಳಿಸಲಾಗಿದೆ.