ಮೀರತ್: ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ನಿರ್ಮಿಸಲಾಗಿದ್ದ ಕಾಳಿ ದೇಗುಲದ ಸೆಟ್ ನಲ್ಲಿ ಪಾದರಕ್ಷೆಯೊಂದಿಗೆ ಪ್ರವೇಶಿಸಿದ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಕಿಂಗ್ ಖಾನ್ ಶಾರಾಖ್ ಖಾನ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಸಲ್ಮಾನ್, ಶಾರೂಖ್ ಪಾದರಕ್ಷೆಗಳೊಂದಿಗೆ ದೇಗುಲ ಪ್ರವೇಶಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದು, ಈ ಕುರಿತು ಹಿಂದು ಮಹಾಸಭಾ ಉತ್ತರ ಪ್ರದೇಶದ ಮೀರತ್ ಕೋರ್ಟ್ನಲ್ಲಿ ದೂರು ಸಲ್ಲಿಸಿದೆ. ಈ ದೂರನ್ನು ಸ್ವೀಕರಿಸಿದ ಕೋರ್ಟ್ ಜನವರಿ 18 ರಂದು ವಿಚಾರಣೆ ನಡೆಸಲು ನಿರ್ಧರಿಸಿದೆ.
ಬಿಗ್ಬಾಸ್ ರಿಯಾಲಿಟಿ ಶೋದ ಆ್ಯಂಕರ್ ಸಲ್ಮಾನ್ ಖಾನ್ ಹಾಗೂ ಅತಿಥಿಯಾಗಿದ್ದ ಶಾರುಖ್ ಇಬ್ಬರು ದೇಗುಲದ ಸೆಟ್ನಲ್ಲಿ ಶೂಟಿಂಗ್ ಮಾಡಿದ್ದರು. ಡಿಸೆಂಬರ್ನಲ್ಲಿ ಇದು ಪ್ರಸಾರವಾಗಿತ್ತು. ಇದೇ ಪ್ರೋಮೋಗಳ ಆಧಾರದ ಮೇಲೆ ಹಿಂದೂ ಮಹಾಸಭಾದ ಮೀರತ್ ಘಟಕದ ಅಧ್ಯಕ್ಷ ಭರತ್ ರಾಜಪೂತ್ ಅವರು ಈ ಕುರಿತು ಚಾನಲ್ನ ಗಮನ ತಂದಿದ್ದು, ಪೊಲೀಸರಿಗೂ ದೂರು ಸಲ್ಲಿಸಿದ್ದರು. ಆದರೆ ಪೋಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹೀಗಾಗಿ ಕೊನೆಯ ಅಸ್ತ್ರವಾಗಿ ಭರತ್ ರಾಜಪೂತ್ ಶಾರೂಖ್, ಸಲ್ಮಾನ್, ಕಾರ್ಯಕ್ರಮದ ನಿರ್ದೇಶಕ ಹಾಗೂ ಚಾನಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.