ಮುಂಬೈ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರುಸ್ತುಮ್ ಚಿತ್ರದ ಅಭಿನಯಕ್ಕಾಗಿ ನಟ ಅಕ್ಷಯ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು ತಮ್ಮ ಭಾವನೆಗಳನ್ನು ಟ್ವಿಟ್ಟರ್ ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಅಕ್ಷಯ್, ಧನ್ಯವಾದ ಹೇಳುವುದು ಸಣ್ಣ ಶಬ್ದವಾಗುತ್ತದೆ. ನನಗೆ ಸಿಕ್ಕಿದ ಈ ಗೌರವಕ್ಕೆ ನಿಜಕ್ಕೂ ಧನ್ಯನಾಗಿದ್ದೇನೆ. ಸದ್ಯ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಅಭಿಮಾನಿಗಳು ಮತ್ತು ತೀರ್ಪುಗಾರರ ತಂಡಕ್ಕೆ ಧನ್ಯವಾದ ಹೇಳಬೇಕು. ರುಸ್ತುಮ್ ನಲ್ಲಿ ನನಗೆ ಸಿಕ್ಕಿದ ಪಾತ್ರ ವಿಶೇಷವಾಗಿತ್ತು. ಭಾರತೀಯ ನೌಕಾಪಡೆಯ ಯೂನಿಫಾರ್ಮ್ ಧರಿಸುವುದೇ ಒಂದು ಗೌರವವಾಗಿತ್ತು. ಇದೀಗ ರಾಷ್ಟ್ರಪ್ರಶಸ್ತಿ ಸಿಗುವ ಮೂಲಕ ಆ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇನ್ನು ಅಕ್ಷಯ್ ಇಲ್ಲಿ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ವಿಶೇಷವಾಗಿ ಸೂಚಿಸಿದ್ದಾರೆ. ''ನನ್ನ ಪತ್ನಿ ಪ್ರಶಸ್ತಿ ಸಿಗಲಿಲ್ಲ ಎಂದು ಆಗಾಗ ತಮಾಷೆ ಮಾಡುತ್ತಿದ್ದಳು. ನನಗೆ ಪ್ರಶಸ್ತಿ ಸಿಗದಿದ್ದಾಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುವುದನ್ನು ನಿಲ್ಲಿಸಿದ್ದು ಒಳ್ಳೆಯದಾಯಿತು. ಈ ಸಂದರ್ಭದಲ್ಲಿ ಪತ್ನಿಗೂ ಧನ್ಯವಾದ ತಿಳಿಸುತ್ತೇನೆ'' ಎಂದು ಅಕ್ಷಯ್ ಹೇಳಿದ್ದಾರೆ.
ಕಾಫಿ ವಿತ್ ಕರಣ್ ಸೀಸನ್ 5ರಲ್ಲಿ ಟ್ವಿಂಕಲ್ ಖನ್ನಾ, ವರ್ಷಕ್ಕೆ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ ಇದುವರೆಗೆ ಒಂದು ಪ್ರಶಸ್ತಿ ಕೂಡ ಬಂದಿಲ್ಲ ಎಂದು ಅಕ್ಷಯ್ ಅವರನ್ನು ಹಂಗಿಸಿದ್ದರು. ನನ್ನ ಪೋಷಕರಿಬ್ಬರೂ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನೀವೇನು ಗೆದ್ದಿದ್ದೀರಿ ಎಂದು ಟ್ವಿಂಕಲ್ ಶೋನಲ್ಲಿ ಪತಿಯನ್ನು ಛೇಡಿಸಿದ್ದರು.
ಅಂದು ಪತ್ನಿ ಕೇಳಿದ ಪ್ರಶ್ನೆಯಿಂದ ಬೇಸರಗೊಂಡಿದ್ದ ಅಕ್ಷಯ್ ಸರಿಯಾದ ಉತ್ತರ ನೀಡಿರಲಿಲ್ಲ. ಆದರೆ ಇಂದು ಪತ್ನಿಯ ಪ್ರಶ್ನೆಗೆ ಪ್ರಶಸ್ತಿ ಗೆದ್ದು ತೋರುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಪತಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಟ್ವಿಂಕಲ್ ಖನ್ನಾಗೂ ಖುಷಿ ತಂದಿದೆ. ನನಗೆ ನಗಬೇಕೊ, ಅಳಬೇಕೊ ಗೊತ್ತಾಗುತ್ತಿಲ್ಲ. ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.