ಇಟಲಿಯ ಟಸ್ಕನಿ ನಗರದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು ದೆಹಲಿಗೆ ಮರಳಿರುವ ಖ್ಯಾತ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಇದೀಗ ಆರತಕ್ಷತೆಗೆ ಅಣಿಯಾಗಿದ್ದಾರೆ. ತಮ್ಮ ಮದುವೆಗೆ ಹತ್ತಿರದ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದ್ದ ದಂಪತಿ ಇದೀಗ ಆರತಕ್ಷತೆಗೆ ಗಣ್ಯರನ್ನು ಆಹ್ವಾನಿಸಿದ್ದಾರೆ.
ಇಂದು ಸಾಯಂಕಾಲ ದೆಹಲಿಯಲ್ಲಿ ನಡೆಯಲಿರುವ ಅದ್ದೂರಿ ಆರತಕ್ಷತೆಗೆ ವಿರಾಟ್ ಮತ್ತು ಅನುಷ್ಕಾ ನಿನ್ನೆ ಪ್ರಧಾನಿಯವರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನಿಸಿದರು. ನಿನ್ನೆ ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಇಬ್ಬರನ್ನೂ ಅಭಿನಂದಿಸಿದರು. ಈ ಚಿತ್ರವನ್ನು ಪ್ರೆಸ್ ಇನ್ಫರ್ಮೇಶ ನ್ ಬ್ಯೂರೊ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಪ್ರಧಾನ ಮಂತ್ರಿ ಕಚೇರಿ ಕೂಡ ಟ್ವಿಟ್ಟರ್ ನಲ್ಲಿ ಇಬ್ಬರ ಭೇಟಿಯನ್ನು ಪೋಟೋ ಸಮೇತ ಪ್ರಕಟಿಸಿದೆ.
ಕಡು ನೀಲಿ ಬಣ್ಣದ ಸಲ್ವಾರ್ ಕಮೀಜ್ ನಲ್ಲಿ ಅನುಷ್ಕಾ ಆಗಮಿಸಿದ್ದರೆ ವಿರಾಟ್ ಕೊಹ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಕುರ್ತಾದಲ್ಲಿ ಮಿಂಚಿದ್ದರು. ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿರಾಟ್ ಅವರ ಸೋದರ ಕೂಡ ಇದ್ದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆಗೆ ಸವ್ಯಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದರು. ಇಂದು ಸಂಜೆ ಆರತಕ್ಷತೆ ದೆಹಲಿಯಲ್ಲಿ ನಡೆದರೆ ಇದೇ 26ರಂದು ಮುಂಬೈಯಲ್ಲಿ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಗಣ್ಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಪಾರ್ಟಿ ಏರ್ಪಡಿಸಲಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ನಡೆಯುವ ಆರತಕ್ಷತೆಯಲ್ಲಿ ಯಾರ್ಯಾರು ಭಾಗವಹಿಸುತ್ತಾರೆ ಎಂಬುದನ್ನು ನೋಡಬೇಕಿದೆ.