ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಮುಂದಿನ ಥ್ರಿಲ್ಲರ್ ಚಿತ್ರ 'ರಯೀಸ್' ಬಿಡುಗಡೆ ಮಾಡುತ್ತಿರುವ ವಿತರಕರ ಮೇಲೆ ಶಿವಸೇನೆ ಪಕ್ಷದ ಛತ್ತೀಸಘರ್ ಘಟಕ ಬೆದರಿಕೆ ಪತ್ರ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಈ ಸಿನೆಮಾದಲ್ಲಿ ಪಾಕಿಸ್ತಾನಿ ನಟಿ ಮಹಿರಾ ಖಾನ್ ನಟಿಸಿದ್ದಾರೆ.
ರಾಹುಲ್ ಧೋಲಾಕಿಯ ನಿರ್ದೇಶನದ 'ರಯೀಸ್' ಜನವರಿ ೨೫ ಕ್ಕೆ ಬಿಡುಗಡೆಯಾಗಲಿದೆ.
ಟ್ವಿಟ್ಟರ್ ನಲ್ಲಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಪುತ್ರ ಮತ್ತು ಯುವ ಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಹಾಗು ಛತ್ತೀಸಘರ್ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ಟ್ಯಾಗ್ ಮಾಡಿರುವ ಮುಂಬೈ ಮೂಲದ ವಿತರಕ ಅಕ್ಷಯ್ ರಾಥಿ, ದೇವನಾಗರಿ ಲಿಪಿಯಲ್ಲಿ ಬರೆಯಲಾಗಿರುವ ಪತ್ರದ ಫೋಟೋ ಹಂಚಿಕೊಂಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ರಾಥಿ "ಪ್ರಿಯ ಆದಿತ್ಯ ಠಾಕ್ರೆ, ನಿಮ್ಮ ಛತ್ತೀಸಘರ್ ಘಟಕದಿಂದ, ನಾವು ಶಾರುಖ್ ಖಾನ್ 'ರಯೀಸ್' ಪ್ರದರ್ಶನ ಮಾಡುತ್ತಿರುವುದರ ವಿರುದ್ಧ ಬೆದರಿಕೆ ಪತ್ರ ಬಂದಿದೆ. ನೀವಿದನ್ನು ಅನುಮೋದಿಸುತ್ತೀರಾ?
"ಪ್ರಿಯ ರಮಣ್ ಸಿಂಗ್ ಮತ್ತು ಅಭಿಷೇಕ್ ಸಿಂಗ್, ದಯವಿಟ್ಟು ಈ ಪ್ರಕರಣದ ಬಗ್ಗೆ ಗಮನಿಸಿ ಮತ್ತು ಛತ್ತಿಸಘರ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ. 'ರಯೀಸ್'" ಎಂದು ಬರೆದಿದ್ದಾರೆ.
ಶಾರುಖ್ ಖಾನ್ ಅವರ ಅಭಿಮಾನಿಗಳು ಈ ವಿಷಯ ಬೆಳಕಿಗೆ ಬರುವಂತೆ ನೋಡಿಕೊಳ್ಳಲು ಕೂಡ ಅವರು ಮನವಿ ಮಾಡಿದ್ದಾರೆ.
"ಆದಿತ್ಯ ಠಾಕ್ರೆ ಗಮನಕ್ಕೆ ಈ ವಿಷಯ ಬರುವಂತೆ ನೋಡಿಕೊಳ್ಳಲು ಎಲ್ಲ ಶಾರುಖ್ ಖಾನ್ ಅಭಿಮಾನಿಗಳನ್ನು ಕೋರುತ್ತಿದ್ದೇನೆ. ಈ ಚೇಷ್ಟೆಯ ವಿರುದ್ಧ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ" ಎಂದು ಕೂಡ ಅವರು ಬರೆದಿದ್ದಾರೆ.
ಯಾರ ಹೆಸರಿಗೂ ಅಧಿಕೃತವಾಗಿ ಬರೆಯದ ಈ ಪಾತ್ರದಲ್ಲಿ, ಸಿನೆಮಾ ಬಿಡುಗಡೆಯನ್ನು ವಿರೋಧಿಸುವಂತೆ ವಿತರಕರಿಗೆ ಬೆದರಿಸಲಾಗಿದೆ.
ದೆಹಲಿ ಮೂಲದ ವಿತರಕ ಜೋಗಿಂದರ್ ಮಹಾಜನ್ ಅವರನ್ನು ಸಂಪರ್ಕಿಸಿದಾಗ, ಉತ್ತರ ಭಾರತ ಭಾಗದ ಯಾವ ವಿತರಕನಿಗೂ ಇಲ್ಲಿಯವರೆಗೂ ಇಂತಹ ಪತ್ರ ಬಂದಿಲ್ಲ ಎಂದಿದ್ದಾರೆ.
"ಸಿನೆಮಾಗ ಬಿಡುಗಡೆಗೆ ಅನುಮೋದನೆ ಸಿಕ್ಕ ಮೇಲೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. 'ರಯೀಸ್; ಜನವರಿ ೨೫ ಕ್ಕೆ ಬಿಡುಗಡೆಯಾಗಲಿದೆ. ನಮ್ಮ ಭಾಗದ ವಿತರಕರಿಗೆ ಯಾರಿಂದಲೂ ಯಾವುದೇ ಬೆದರಿಕೆ ಬಂದಿಲ್ಲ" ಎಂದು ಮಹಾಜನ್ ಹೇಳಿದ್ದಾರೆ.