ನವದೆಹಲಿ: ಡಿಸೆಂಬರ್ 1ಕ್ಕೆ ಚಿತ್ರ ಬಿಡುಗಡೆಗೆ ಮುನ್ನ ವಿಶೇಷ ಸಮಿತಿ ಮುಂದೆ ಸಿನಿಮಾವನ್ನು ತೋರಿಸಲು ವಿವಾದಾತ್ಮಕ ಪದ್ಮಾವತಿ ಚಲನಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ವಿವಾದಕ್ಕೆ ಮತ್ತೊಂದು ಮಗ್ಗುಲು ಸಿಕ್ಕಿದೆ.
ನಿನ್ನೆ ಸಂಜಯ್ ಲೀಲಾ ಬನ್ಸಾಲಿಯವರ ಮುಂಬೈಯ ಜುಹು ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 15 ಮಂದಿ ಅಖಂಡ ರಜ್ಪೂತಾನ ಸೇವಾ ಸಂಘದವರನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಚಿತ್ರ ಬಿಡುಗಡೆಗೂ ಮುನ್ನ ತಮಗೆ ತೋರಿಸಬೇಕೆಂದು ಮತ್ತು ಸೆನ್ಸಾರ್ ಮಂಡಳಿಗೆ ಹೋಗುವ ಮುನ್ನ ಚಿತ್ರವನ್ನು ತಾವು ನೋಡಬೇಕೆಂದು ಒತ್ತಾಯಿಸುತ್ತಿದ್ದರು.
ಅನೇಕ ವಿವಾದಗಳು ಮತ್ತು ಪ್ರತಿಭಟನೆ ನಂತರ ಇದೀಗ ನಿರ್ದೇಶಕರು ಚಿತ್ರವನ್ನು ವಿಶೇಷ ಸಮಿತಿ ಮುಂದೆ ತೋರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಖಂಡ ರಜಪೂತಾನ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಆರ್ ಪಿ ಸಿಂಗ್, ಬನ್ಸಾಲಿ ಮತ್ತು ರಜಪೂತ ಸಂಘಟನೆಗಳ ಮಧ್ಯವರ್ತಿಯಾಗಿರುವ ಮಹವೀರ ಜೈನ್ ಎಂಬುವವರಿಂದ ಕರೆ ಬಂದಿದ್ದು, ಚಿತ್ರ ಬಿಡುಗಡೆಗೂ ಮುನ್ನ ಇದೇ 15ರಿಂದ 18ರ ನಡುವೆ ಚಿತ್ರವನ್ನು ಸಮಿತಿ ಮುಂದೆ ತೋರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.