ಬಾಲಿವುಡ್

ಮಹಾತ್ಮ ಗಾಂಧಿಯ ಪುಣ್ಯಭೂಮಿ ಈಗ ಅತ್ಯಾಚಾರಿಗಳ ನಾಡಾಗುತ್ತಿದೆ: ಮಲ್ಲಿಕಾ ಶೆರಾವತ್

Vishwanath S
ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಪುಣ್ಯಭೂಮಿ ಇಂದು ಅತ್ಯಾಚಾರಿಗಳ ಭೂಮಿಯಾಗುತ್ತಿದೆ ಎಂದು ಹೇಳಿದ್ದಾರೆ. 
ದಾಸ್ ದೇವ್ ಚಿತ್ರದ ವಿಶೇಷ ಪ್ರದರ್ಶನದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಲ್ಲಿಕಾ ಶೆರಾವತ್ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 
ದೇಶದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳು ನಾಚಿಕೆಗೇಡಿನ ಸಂಗತಿ. ಗಾಂಧಿಜೀ ಅವರ ಪುಣ್ಯಭೂಮಿ, ಇಂದು ಅತ್ಯಾಚಾರಿಗಳ ನಾಡಾಗುತ್ತಿದೆ. ದೇಶದಲ್ಲಿ ಮಾಧ್ಯಮಗಳು ಇಂದು ಪ್ರಬಲ ಶಕ್ತಿಯಾಗಿದ್ದು ಮಾಧ್ಯಮಗಳು ನಿರ್ಭೀತವಾಗಿ ಕೆಲಸ ಮಾಡುತ್ತಿವೆ. ಹೀಗಾಗಿ ಅತ್ಯಾಚಾರ ಪ್ರಕರಣಗಳು ಬಯಲಿಗೆ ಬರುತ್ತಿದ್ದು ಮಾಧ್ಯಮಗಳ ಮೇಲೆ ಭರವಸೆ ಇಡಬಹುದು ಎಂದು ನಾನು ಭಾವಿಸುತ್ತೇನೆ ಎಂದರು. 
ಮಾಧ್ಯಮಗಳ ನಿರ್ಭಿತ ವರದಿ ಹಾಗೂ ಒತ್ತಡದಿಂದಾಗಿ ದೇಶದಲ್ಲಿ ಅತ್ಯಾಚಾರ ಕುರಿತಾದ ಕಾನೂನು ಪ್ರಬಲವಾಗಿದೆ. ಹೀಗಾಗಿ ನಾನು ಮಾಧ್ಯಮಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. 
ಏಪ್ರಿಲ್ 22ರಂದು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದರು.
SCROLL FOR NEXT