ನವದೆಹಲಿ: ಬಾಲಿವುಡ್ ಹಾಗೂ ವಿವಾದಗಳಿಗೆ ಹಳೆಯ ನಂಟು. ಅದರಲ್ಲಿಯೂ ಇತೀಚೆಗೆ ತೆರೆ ಕಾಣುತ್ತಿರುವ ಐತಿಹಾಸಿಕ ಚಿತ್ರಗಳ ವಿಚಾರದಲ್ಲಿ ಈ ವಿವಾದಗಳು ಸೃಷ್ಟಿಯಾಗುವುದು ಸರ್ವೇ ಸಾಮಾನ್ಯವೆನ್ನುವಂತಾಗಿದೆ. ಕಳೆದ ಎರಡು-ಮೂರು ತಿಂಗಳಿನಿಂದ ಸಆಕಷ್ಟು ಸುದ್ದಿ ಮಾಡಿದ್ದ 'ಪದ್ಮಾವತ್' ಇದೀಗ ತೆರೆಗೆ ಬಂದಿರುವಾಗಲೇ ಹಿಂದಿಯ ಇನ್ನೊಂದು ಚಿತ್ರಕ್ಕೆ ಸಹ ಕಂಟಕ ಎದುರಾಗಿದೆ.
ಕಂಗನಾ ರಣಾವುತ್ ಅಭಿನಯದ ಐತಿಹಾಸಿಕ ಚಿತ್ರ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಆಧಾರಿತ ಚಿತ್ರದಲ್ಲಿ ರಾಣಿಯ ವ್ಯಕ್ತಿತ್ವಕ್ಕೆ ಧಕ್ಕೆಯುಂಟುಮಾಡುತ್ತಿದ್ದಾರೆ. ಇತಿಹಾಸವನ್ನು ತಪ್ಪಾಗಿ ತೋರಿಸಲಾಗುತ್ತಿದೆ ಎಂಡು ಆರೋಪಿಸಿ ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.
ಈ ವರ್ಷಾಂತದಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಚಿತ್ರದಲ್ಲಿ ನಟಿ ಕಂಗನಾ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿಬಾಯಿ (ಕಂಗನಾ) ಬ್ರಿಟೀಷ್ ಅಧಿಕಾರಿಗಳೊಡನೆ ಪ್ರಣಯ ಸಂಬಂಧವಿರಿಸಿಕೊಂಡಿದ್ದಳು ಎಂದು ತೋರಿಸಲಾಗುತ್ತಿದೆ. ಜಯಶ್ರೀ ಮಿಶ್ರಾ ಎನ್ನುವವರು ಬರೆದ ಲಕ್ಷ್ಮಿಬಾಯಿ ವಿವಾದಾತ್ಮಕ ಜೀವನ ಚರಿತ್ರೆ ಪುಸ್ತಕದ ಕಥೆಯನ್ನಾಧರಿಸಿ ಚಿತ್ರ ತಯಾರಾಗುತ್ತಿದ್ದು ಚಿತ್ರದ ಚಿತ್ರೀಕರಣವನ್ನು ತಕ್ಷಣ ನಿಲ್ಲಿಸಬೇಕು ಎಂದು ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೂರು ದಿನಗಳೊಳಗೆ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಜಯಶ್ರಿ ಮಿಶ್ರಾ ಎನ್ನುವ ಬರಹಗಾರ್ತಿ ಬರೆದಿದ್ದ 'ರಾಣಿ' ಎನ್ನುವ ಪುಸ್ತಕದಲ್ಲಿ ಝಾನ್ಸಿ ರಾಣಿಗೂ ಬ್ರಿಟಿಷ್ ಅಧಿಕಾರಿ ರಾಬರ್ಟ್ ಎಲಿಸ್ ಎನ್ನುವವನಿಗೂ ಸಂಪರ್ಕವಿತ್ತೆಂದು ಉಲ್ಲೇಖಿಸಲಾಗಿತ್ತು. ಈ ಕಾರಣಕ್ಕಾಗಿ ಭಾರೀ ವಿವಾದಕ್ಕೀಡಾದ ಪುಸ್ತಕವನ್ನು ಉತ್ತರ ಪ್ರದೇಶದ ಮಾಯಾವತಿ ನೇತೃತ್ವದ ಸರ್ಕಾರ 2008ರಲ್ಲಿ ನಿಷೇಧಿಸಿತ್ತು.