ಸಿನಿಮಾ ಸುದ್ದಿ

'ಕೆಂಡಸಂಪಿಗೆ'ಯ ಗಿಣಿಮರಿ ಮಾನ್ವಿತಾಗೆ ಹೊಸಹುಟ್ಟು

Guruprasad Narayana

ಬೆಂಗಳೂರು: ರೇಡಿಯೋ ಜಾಕಿ ವೃತ್ತಿಯಿಂದ ನಟನೆಗೆ ಜಿಗಿದಿರುವ ಮಾನ್ವಿತಾ ಹರೀಶ್ ಅವರಿಗೆ ಸಂತಸದ ಸಮಯ. ಸೂರಿ ನಿರ್ದೇಶನದ 'ಕೆಂಡಸಂಪಿಗೆ - ಪಾರ್ಟ್ ೨ ಗಿಣಿಮರಿ ಕೇಸ್' ನಲ್ಲಿ ನಾಯಕ ನಟಿಯಾಗಿರುವ ಇವರಿಗೆ ಚೊಚ್ಚಲ ಚಿತ್ರದಲ್ಲೇ ಜನಪ್ರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಮಧುರ ಅನುಭವ.

"ನನಗೆ ಯಾರೂ ಗಾಡ್ ಫಾದರ್ ಇಲ್ಲ. ರೇಡಿಯೋ ಜಾಕಿಯಾಗಿ ನನ್ನ ಸಂಪರ್ಕಗಳನ್ನು ಬೆಳೆಸಿಕೊಂಡೆ. ಅವರಲ್ಲಿ ಒಬ್ಬರು ನಿರ್ದೇಶಕ ಸೂರಿಯವರ ಬಳಿ ೧೮ ತಿಂಗಳ ಹಿಂದೆ ನನ್ನ ಹೆಸರನ್ನು ಸೂಚಿಸಿದ್ದರು. ಆಡಿಶನ್ ಕರೆದಾಗ ನಾನು ಆಯ್ಕೆಯಾದೆ" ಎನ್ನುತ್ತಾರೆ ನಟಿ. ತನ್ನ ನಟನಾ ಕೌಶಲ್ಯವಲ್ಲದೆ ಸೂರಿಯವರಿಗೆ ಬೇಕಾಗಿದ್ದ ಹಲವಾರು ಗುಣಗಳು ತನ್ನಲ್ಲಿವೆ ಎನ್ನುವ ಅವರು "ನಾನು ಅತಿ ಹೆಚ್ಚು ದೂರ ಡ್ರೈವ್ ಮಾಡಬಲ್ಲೆ. ಕನ್ನಡ ಚೆನ್ನಾಗಿ ಮಾತನಾಡಬಲ್ಲೆ. ಮಂಗಳೂರು, ಮಲೆನಾಡು, ಧಾರವಾಡ ಮತ್ತು ಬೆಂಗಳೂರು ಪ್ರದೇಶಗಳ ಕನ್ನಡ ಬಲ್ಲೆ. ನನ್ನ ಲುಕ್ಸ್ ಬಗ್ಗೆ ನಾನು ತೀರ್ಪು ನೀಡಲಾರೆ" ಎನ್ನುತ್ತಾರೆ ಮುದ್ದು ಮುಖದ ಮಾನ್ವಿತಾ.

ಸಿನೆಮಾ ಬಗ್ಗೆ ಮಾತನಾಡುವ ಮಾನ್ವಿತಾ "ಈ ಸಿನೆಮಾದಲ್ಲಿ ಸಾಕಷ್ಟು ಪ್ರಯಾಣ ಇದೆ. ವಿನೀತ ಸ್ವಭಾವದ, ಸೃಜನಶೀಲ ವ್ಯಕ್ತಿ ಸೂರಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಕನಸು ನನಸಾದಂತೆ" ಎನ್ನುತ್ತಾರೆ.

ಬೇರೆ ಬೇರೆ ಪಾತ್ರಗಳ ನಿರೀಕ್ಷೆಯಲ್ಲಿರುವ ಮಾನ್ವಿತಾ ಬೇರೆ ಭಾಷೆಗಳ ಸಿನೆಮಾಗಳಲ್ಲೂ ನಟಿಸುವಾಸೆ ಹೊಂದಿದ್ದಾರೆ. ಕೆಂಡಸಂಪಿಗೆ ಪಾರ್ಟ್ ೨ ಗಿಣಿಮರಿ ಕೇಸ್ ಸೆಪ್ಟಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸುದ್ದಿ ಇದೆ.

SCROLL FOR NEXT