ಸಿನಿಮಾ ಸುದ್ದಿ

ಕೈತಪ್ಪಿದ ಚಿರಂಜೀವಿ ಸಿನೆಮಾ ನಿರ್ದೇಶನ; ಪೂರಿ ಜಗನ್ನಾಥ್ ವಿಷಾದ

Guruprasad Narayana

ಚೆನ್ನೈ: ಮೆಗಾಸ್ಟಾರ್ ಚಿರಂಜೀವಿ ಅವರ ಸಿನೆಮಾ ನಿರ್ದೇಶಿಸುವ ಅವಕಾಶ ಕೈತಪ್ಪಿದ್ದಕ್ಕೆ 'ಇದು ಕೈತಪ್ಪಿ ಹೋಯಿತು' ಎಂದು ವಿಷಾದ ವ್ಯಕ್ತಪಡಿಸಿರುವ ನಿರ್ದೇಶಕ ಪೂರಿ ಜಗನ್ನಾಥ್, ಮುಂದೆ ಮತ್ತೆ ಚಿರಂಜೀವಿ ಜೊತೆ ಕೆಲಸ ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

ಚಿರಂಜೀವಿ ಅವರ ೧೫೧ ನೆಯ ಸಿನೆಮಾವನ್ನು ನಿರ್ದೇಶಿಸಲು 'ಪೋಕಿರಿ' ಸಿನೆಮಾದ ನಿರ್ದೇಶಕರಿಗೆ ಮೊದಲ ಅವಕಾಶ ನೀಡಲಾಗಿತ್ತು. ಆದರೆ ಈಗ ಆ ಅವಕಾಶವನ್ನು ವಿ ವಿ ವಿನಾಯಕ್ ಬಾಚಿಕೊಂಡಿದ್ದಾರೆ.

"ಎಲ್ಲವು ಸುಸೂತ್ರವಾಗಿ ನಡೆಯಲಿಲ್ಲ. ಇದು ದುರದೃಷ್ಟಕರ. ಅವರ ಸಿನೆಮಾ ನಿರ್ದೇಶನದ ಅವಕಾಶ ಕಳೆದುಕೊಂಡೆ. ಮುಂದೊಂದು ದಿನ ಖಂಡಿತವಾಗಿಯೂ ಅವರ ಸಿನೆಮಾ ನಿರ್ದೇಶಿಸಲಿದ್ದೇನೆ" ಎಂದಿದ್ದಾರೆ ಜಗನ್ನಾಥ್.

ಪೂರಿ ಜಗನ್ನಾಥ್ ಬರೆದಿದ್ದ ಕಥೆಯ ದ್ವಿತೀಯಾರ್ಧ ಚಿರಂಜೀವಿಯವರಿಗೆ ಹಿಡಿಸದೆ ಹೋದದ್ದರಿಂದ ೪೯ ವರ್ಷದ ನಿರ್ದೇಶಕ ಅವಕಾಶ ವಂಚಿತರಾಗಿದ್ದಾರೆ.

"ಅವರು ನನಗೆ ಹೆಚ್ಚಿನ ಸಮಾಯವಕಾಶ ನೀಡಿದ್ದರೆ ಸ್ಕ್ರಿಪ್ಟ್ ಬದಲಿಸುತ್ತಿದ್ದೆ. ಆದರೆ ಅವರು ಸ್ಕ್ರಿಪ್ಟ್ ಹಿಡಿಸಲಿಲ್ಲ ಎಂದು ಮಾಧ್ಯಮದವರಿಗೆ ಹೇಳಿದರು. ಅವರು ನನ್ನ ಜೊತೆಗೆ ನೇರವಾಗಿ ಈ ವಿಷಯ ಚರ್ಚಿಸದಿದ್ದಕ್ಕೆ ನನಗೆ ಬೇಸರವಾಯಿತು. ಆಗಿದ್ಯೂ ಇವೆಲ್ಲವನ್ನೂ ಹಿಂದಕ್ಕೆ ಬಿಟ್ಟು ನಮ್ಮ ಗೆಳೆತನವನ್ನು ಮುಂದುವರೆಸುತ್ತೇನೆ" ಎಂದಿದ್ದಾರೆ.

ಜಗನ್ನಾಥ್ ನಿರ್ದೇಶನದ ವರುಣ್ ತೇಜ್ ನಟನೆಯ 'ಲೋಫರ್' ಈ ವಾರ ಬಿಡುಗಡೆಗೆ ಸಿದ್ಧವಾಗಿದೆ.



SCROLL FOR NEXT