ಸಿನಿಮಾ ಸುದ್ದಿ

'ಉಪ್ಪು, ಹುಳಿ, ಖಾರ' ಸಂಬಂಧ ಮಾಲಾಶ್ರೀ ಕಣ್ಣೀರು

Lingaraj Badiger
ಬೆಂಗಳೂರು: ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು, ಹುಳಿ, ಖಾರ' ಚಿತ್ರದಿಂದ ಕೈಬಿಟ್ಟಿದ್ದಕ್ಕೆ ಹಿರಿಯ ನಟಿ ಮಾಲಾಶ್ರೀ ಅವರು ಕಣ್ಣೀರಿಟ್ಟ ಘಟನೆ ಗುರುವಾರ ನಡೆಯಿತು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಲಾಶ್ರೀ, ಚಿತ್ರದ ನಿರ್ಮಾಪಕ ಕೆ.ಮಂಜು ಅವರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ಅಲ್ಲದೆ ಎರಡು ದಿನ ನಾನು ಶೂಟಿಂಗ್ ನಲ್ಲೂ ಭಾಗವಹಿಸಿದ್ದೆ. ಆದರೆ ನಂತರ ದಿಢೀರ್ ಅಂತ ಚಿತ್ರದಿಂದ ನನ್ನನ್ನು ಕೈಬಿಡಲಾಗಿದ್ದು, ಇದರಿಂದ ತಮಗೆ ತುಂಬಾ ನೋವಾಗಿದೆ ಎಂದರು.
ಎರಡು ದಿನದ ಶೂಟಿಂಗ್ ನಂತರ ನನ್ನ ಅಭಿನಯ ಚೆನ್ನಾಗಿಲ್ಲ ಎಂದು ಹೇಳಿದರು. ಇದನ್ನು ಕೇಳಿ ನಿಜಕ್ಕೂ ನನಗೆ ಆಘಾತವಾಯಿತು. ನನ್ನನ್ನು ಕರೆದು ಅವಮಾನ ಮಾಡಿರುವುದು ತುಂಬಾ ನೋವಾಗಿದೆ. ನನ್ನ 25 ವರ್ಷದ ಅನುಭವದಲ್ಲಿ ಎಂದಿಗೂ ಹೀಗೆ ಆಗಿಲ್ಲ ಎಂದು ಮಾಲಾಶ್ರೀ ಕಣ್ಣೀರಿಟ್ಟರು. 
ಇದು ಕೆ.ಮಂಜು ನಿರ್ಮಾಣದ ಸಿನಿಮಾ ಅಂತ ನನಗೆ ಹೇಳಿದ್ದರು. ಆದರೆ ಪೋಸ್ಟರ್ ನಲ್ಲಿ ಕೆ.ಮಂಜು ಹೆಸರೇ ಇರಲಿಲ್ಲ ಎಂದರು. ಅಲ್ಲದೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಟಿ, ಹಣದ ವಿಚಾರವಾಗಿ ನಾನು ಎಂದೂ ತಲೆಕೆಡಿಸಿಕೊಂಡಿಲ್ಲ ಎಂದರು.
SCROLL FOR NEXT