ಸಿನಿಮಾ ಸುದ್ದಿ

ಹೊಸ ರೂಪದೊಂದಿಗೆ ಬಬ್ರುವಾಹನ ಈ ವಾರ ತೆರೆಗೆ

Vishwanath S

ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ ನಟ ಡಾ. ರಾಜ್ ಕುಮಾರ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಬಬ್ರುವಾಹನ ಚಿತ್ರ ಹೊಸ ರೂಪಾಂತರದೊಂದಿಗೆ ಈ ವಾರ ಬಿಡುಗಡೆಯಾಗುತ್ತಿದೆ.

ಏಪ್ರಿಲ್ 24 ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರ ಸವಿ ನೆನಪಿಗಾಗಿ ಏಪ್ರಿಲ್ 22 ರಂದು ಬಬ್ರುವಾಹನ ಚಿತ್ರ ಬಿಡುಗಡೆಯಾಗಲಿದೆ.

ಹೊಸ ಆವೃತ್ತಿಯ ಬಬ್ರುವಾಹನ ಚಿತ್ರದ ಸ್ಕಿನಿಂಗ್ ಬೆಂಗಳೂರಿನ ರೇಣುಕಾಂಭ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ನಟಿ ಬಿ. ಸರೋಜದೇವಿ, ನಿರ್ದೇಶಕ ಎಚ್ ಆರ್ ಭಾರ್ಗವ, ನಟ ರಾಮಕೃಷ್ಣ ಚಿತ್ರವನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಬಬ್ರುವಾಹನ ಚಿತ್ರ ನಟಿ ಸರೋಜದೇವಿ ಅವರು, ರಾಜ್ಕುಮಾರ್ ಅವರ ಗುಣಗಾನ ಮಾಡಿದರು. ಯಾವುದೇ ತಂತ್ರಜ್ಞಾನವಿಲ್ಲದ ಸಮಯದಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ಅದ್ಭುತ ಚಿತ್ರವನ್ನು ತೆರೆಗೆ ತಂದಿದ್ದರು ಎಂದಿದ್ದಾರೆ.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 1977ರಲ್ಲಿ ಬಿಡುಗಡೆಯಾಗಿದ್ದ ಪೌರಾಣಿಕ ಚಿತ್ರ ಬಬ್ರುವಾಹನ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡ ಅವರ ಪುತ್ರ ಕೆಸಿಎನ್ ಮೋಹನ್ ಅವರು ಚಿತ್ರಕ್ಕೆ ಹೊಸ ರೂಪ ಕೊಟ್ಟು ಬಿಡುಗಡೆಗೆ ಅಣಿಮಾಡಿದ್ದಾರೆ. ಬಬ್ರುವಾಹನ ಮೂಲ ಚಿತ್ರವನ್ನು 35 ಲಕ್ಷದಲ್ಲಿ ನಿರ್ಮಿಸಲಾಗಿದ್ದು, ಇದೀಗ ರೂಪಾಂತರಗೊಂಡಿರುವ ಚಿತ್ರಕ್ಕೆ 60 ಲಕ್ಷ ವೆಚ್ಚ ಮಾಡಲಾಗಿದೆ.

ಬಹುತಾರಾಗಣ ಒಳಗೊಂಡಿದ್ದ ಬಬ್ರುವಾಹನ ಚಿತ್ರದಲ್ಲಿ ರಾಜ್ ಕುಮಾರ್ ಸೇರಿದಂತೆ ಬಿ. ಸರೋಜಾ ದೇವಿ, ಕಾಂಚನ, ಜಯಮಾಲ, ವಜ್ರಮುನಿ, ತೂಗದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಮತ್ತು ರಾಮಕೃಷ್ಣ ಅವರು ಅಭಿನಯಿಸಿದ್ದರು.

SCROLL FOR NEXT