ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮೆಚ್ಚುಗೆ ಗಳಿಸಿರುವ ರಾಮಾ ರಾಮಾ ರೇ

Sumana Upadhyaya
ಬೆಂಗಳೂರು: ನಿರ್ದೇಶಕ ಸತ್ಯ ಪ್ರಕಾಶ್ ಅವರ ಮುಂದಿನ ಚಿತ್ರ ರಾಮಾ ರಾಮಾ ರೆಯ ಟ್ರೈಲರ್ ಭಾರೀ ಸದ್ದು ಮಾಡುತ್ತಿದ್ದು, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಕಣ್ಮನವನ್ನೂ ಸೆಳೆದಿದೆ. ಯುವ ನಟ, ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ಪವನ್ ಕುಮಾರ್, ಅನೂಪ್ ಭಂಡಾರಿ, ಧನಂಜಯ್, ಶೃತಿ ಹರಿಹರನ್ ಮೊದಲಾದವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಟ್ರೈಲರ್ ನ್ನು ಹಂಚಿಕೊಳ್ಳುತ್ತಿದ್ದಾರೆ.
ಧನಂಜಯ್ ನಟನೆಯ ಜಯನಗರ 4ನೇ ಬ್ಲಾಕ್ ಎಂಬ ಕಿರು ಚಿತ್ರ ನಿರ್ಮಾಣದ ಮೂಲಕ ತಮ್ಮ ಸಿನಿಮಾ ವೃತ್ತಿಯನ್ನು ಆರಂಭಿಸಿದ ಸತ್ಯ, ರಾಮಾ ರಾಮಾ ರೇ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ''ಚಿತ್ರೋದ್ಯಮದ ಸಹೋದ್ಯೋಗಿಗಳು ತುಂಬು ಹೃದಯದಿಂದ ನನಗೆ ಪ್ರೋತ್ಸಾಹ ನೀಡಿ ಜನರಿಗೆ ತಲುಪುವಂತೆ ಮಾಡಿದ್ದಾರೆ. ನನಗೆ ಸಿಕ್ಕ ಬೆಂಬಲಕ್ಕೆ ತುಂಬಾ ಖುಷಿಯಾಗಿದ್ದೇನೆ, ಖಂಡಿತಾ ಈ ಚಿತ್ರ ಜನರ ಗಮನ ಸೆಳೆಯುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಸತ್ಯಪ್ರಕಾಶ್.
ರಾಮಾ ರಾಮಾ ರೆ ಚಿತ್ರ ನಿರ್ಮಾಣದ ಆರಂಭದ ದಿನಗಳನ್ನು ಸ್ಮರಿಸುವ ನಿರ್ದೇಶಕ ಸತ್ಯ, ತಮ್ಮ ಸ್ವತಂತ್ರ ಚಿತ್ರವನ್ನು ನಿರ್ದೇಶಿಸಲು ಹೊರಟಾಗ ನಿರ್ಮಾಣ ಮಾಡುವವರು ಯಾರೂ ಸಿಕ್ಕಲಿಲ್ಲ. ಕೊನೆಗೆ ಚಿತ್ರದಲ್ಲಿ ಭಾಗಿಯಾಗಿದ್ದವರೇ ಹೂಡಿಕೆ ಮಾಡಿದರು. ಚಿತ್ರದ ಬಗ್ಗೆ ಕೇಳಿಬರುವ ಪ್ರತಿಯೊಂದು ಉತ್ತಮ ಅಭಿಪ್ರಾಯಗಳು ನಮಗೆ ಶಕ್ತಿ ನೀಡಿದಂತೆ ಎನ್ನುತ್ತಾರೆ.
ಜೈಲಿನಿಂದ ತಪ್ಪಿಸಿಕೊಂಡು ಬಂದ ಯುವಕನೊಬ್ಬನ ರಸ್ತೆ ಪ್ರಯಾಣವನ್ನು ಚಿತ್ರ ವಿವರಿಸುತ್ತದೆ. ಯುವಕನ ರಸ್ತೆ ಪ್ರಯಾಣದ ಜೊತೆಗೆ ಜೀವನದ ಪ್ರಯಾಣವನ್ನು ಕೂಡ ವಿವರಿಸುತ್ತದೆ. ಹುಟ್ಟು-ಸಾವಿನ ಮಧ್ಯೆ ಏನೆಲ್ಲಾ ನಡೆಯುತ್ತದೆ ಅವುಗಳನ್ನು ಚಿತ್ರದಲ್ಲಿ ಹೇಳಲು ಪ್ರಯತ್ನ ಮಾಡಿದ್ದೇವೆ ಎಂದು ತಮ್ಮ ಚಿತ್ರದ ಬಗ್ಗೆ ಒಂದು ತುಣುಕು ನೀಡುತ್ತಾರೆ.
ಚಿತ್ರಕ್ಕೆ ಸತ್ಯ ಕಥೆ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಚಿತ್ರದ ಹಿಂದಿನ ಕೆಲಸವನ್ನು ನೊಬಿನ್ ಪೌಲ್ ಮಾಡಿದ್ದಾರೆ.
ಚಿತ್ರದಲ್ಲಿ ಕೆ.ಜಯರಾಮ್, ನಟರಾಜ್ ಎಸ್.ಭಟ್, ಧರ್ಮಣ್ಣ ಕಡೂರು ಮೊದಲಾದವರಿದ್ದಾರೆ. ಲವಿತ್ ಅವರ ಛಾಯಾಗ್ರಹಣವಿದ್ದು, ಬಿ.ಎಸ್.ಕೆಂಪರಾಜು ಅವರ ಸಂಪಾದಕತ್ವವಿದೆ. ಚಿತ್ರಕ್ಕೆ ಹಿರಿಯ ತಂತ್ರಜ್ಞರು ಮತ್ತು ಹೊಸಬರು ಕೆಲಸ ಮಾಡಿದ್ದಾರೆ.
ಸೆಪ್ಟೆಂಬರ್ 2ಕ್ಕೆ ಚಿತ್ರದ ಆಡಿಯೋವನ್ನು, ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಯೋಜನೆ ಸತ್ಯಪ್ರಕಾಶ್ ಅವರದ್ದು. ವಿವಿಧ ಚಿತ್ರೋತ್ಸವಗಳಿಗೆ ಚಿತ್ರವನ್ನು ಕಳುಹಿಸುವ ಯೋಜನೆ ಕೂಡ ಇದೆ ಎನ್ನುತ್ತಾರೆ ಸತ್ಯ ಪ್ರಕಾಶ್.
SCROLL FOR NEXT