ಸಿನಿಮಾ ಸುದ್ದಿ

ನಾಗರಹಾವಿಗೆ ದರ್ಶನ್ ವಿಶೇಷ ಕೊಡುಗೆ

Srinivasamurthy VN

ಬೆಂಗಳೂರು: ಸಾಹಸ ಸಿಂಹ ವಿಷ್ಣು ವರ್ಧನ್ ಅವರ 201ನೇ ಚಿತ್ರ "ನಾಗರಹಾವು" ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕುತ್ತಿದ್ದು, ಈ ಹಾಡನ್ನು ದಿವಂಗತ  ನಟ ವಿಷ್ಣು ವರ್ಧನ್ ಅವರಿಗೆ ಅರ್ಪಣೆ ಮಾಡಲಾಗುತ್ತಿದೆಯಂತೆ.

ಸಾಹಸಸಿಂಹ ವಿಷ್ಣವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ತೋರಿಸಲಾಗುತ್ತಿದೆ ಎಂಬ ಒಂದೇ ಕಾರಣದಿಂದಾಗಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ  ನಿರ್ದೇಶನದ `ನಾಗರಹಾವು' ಚಿತ್ರದಲ್ಲಿ ಇದೀಗ ನಟ ಚಾಲೆಂಜಿಂಗ್ ಸ್ಟಾರ್  ದರ್ಶನ್ ಕೂಡ ಭಾಗಿಯಾಗಿದ್ದು, ವಿಷ್ಣುವರ್ಧನ್ ಕುರಿತ ಹಾಗೂ ಅವರಿಗೆ ಅರ್ಪಣೆ ಮಾಡಿ ನಿರ್ಮಿಸಲಾಗುತ್ತಿರುವ  ವಿಶೇಷ ಹಾಡಿನಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಇದೇ ಸೆಪ್ಟೆಂಬರ್ 2 ಮತ್ತು 3ರಂದು ಮೈಸೂರಿನಲ್ಲಿ ಈ ವಿಶೇಷ ಹಾಡಿನ ಚಿತ್ರೀಕರಣ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು,  300 ನೃತ್ಯಪಟುಗಳೊಂದಿಗೆ ನಟ ದರ್ಶನ್ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಈ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಸಕಲ ಸಿದ್ಧತೆ ನಡೆಸಿಕೊಳ್ಳಲಾಗಿದ್ದು, ಮೈಸೂರು ಮಹಾರಾಜ ಕಾಲೇಜಿನ  ಮೈದಾನದಲ್ಲಿ ವಿಷ್ಣು ವರ್ಧನ್ ಅವರ ಬೃಹತ್ ಕಟೌಟ್ ಇಟ್ಟು ಚಿತ್ರೀಕರಣ ನಡೆಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.

ಕವಿರಾಜ್ ರಚಿಸಿರುವ ಹಾಡಿಗೆ ಗುರುಕಿರಣ್ ಮೋಡಿ ಮಾಡುವಂಥಾ ಸಂಗೀತ ನೀಡಿದ್ದಾರೆ. ವಿಶೇಷ ಗೀತೆಗೆ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.  ದಿವಂಗತ ನಟ ವಿಷ್ಣು ವರ್ಧನ್ ಅವರ ಗ್ರಾಫಿಕ್ಸ್, ನಟಿ ರಮ್ಯಾ ಸೇರಿದಂತೆ ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿರುವ ನಾಗರಹಾವು ಚಿತ್ರಕ್ಕೆ ಇದೀಗ ದರ್ಶನ್ ಅವರ ಸೇರ್ಪಡೆ  ಚಿತ್ರತಂಡಕ್ಕೆ ಮತ್ತಷ್ಟು ಹುರುಪು ನೀಡಿದೆ.

SCROLL FOR NEXT