ಸಿನಿಮಾ ಸುದ್ದಿ

ರಿಯಲ್ ಸ್ಟಾರ್ ನಿರ್ದೇಶಿಸಲಿರುವ ಕೆ ಮಾದೇಶ್

Guruprasad Narayana
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ನಿರ್ದೇಶಿಸಲು ಹಲವು ನಿರ್ದೇಶಕರು ಬಯಸುವುದು ಸಾಮಾನ್ಯ. ಇತ್ತೀಚಿಕೆ ಶಶಾಂಕ್  ಉಪೇಂದ್ರ ಅವರ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ವರದಿಯ ಬೆನ್ನಲ್ಲೇ ನಿರ್ದೇಶಕ ಕೆ ಮಾದೇಶ್ ಕೂಡ ಉಪೇಂದ್ರ ಅವರಿಗೆ ಸ್ಕ್ರಿಪ್ಟ್ ಒಂದನ್ನು ಹಿಡಿದು ಸಜ್ಜಾಗಿದ್ದಾರೆ. 
ಈ ವರದಿಯನ್ನು ಧೃಢೀಕರಿಸುವ ಮಾದೇಶ್ "ಹೌದು, ಡಿಸೆಂಬರ್ ೧೨ ಕ್ಕೆ ಮುಹೂರ್ತ ನೆರವೇರಲಿದ್ದು, ಉಪ್ಪಿಯವರ ಇತರ ಯೋಜನೆಗಳನ್ನು ನೋಡಿಕೊಂಡು ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ" ಎನ್ನುತ್ತಾರೆ.
ಸದ್ಯಕ್ಕೆ ಶರಣ್ ಮತ್ತು ಚಿಕ್ಕಣ್ಣ ನಟಿಸಿರುವ ರಾಮು ನಿರ್ಮಾಣದ 'ರಾಜ್-ವಿಷ್ಣು' ಸಿನೆಮಾದ ಚಿತ್ರೀಕರಣ ಮುಗಿಸಿದ್ದಾರೆ ಮಾದೇಶ್. 
'ಉಪೇಂದ್ರ ಮತ್ತೆ ಹುಟ್ಟಿ ಬಾ- ಇಂತಿ ಪ್ರೇಮ' ಸಿನೆಮಾದ ಬಹುತೇಕ ಚಿತ್ರೀಕರಣ ಮುಗಿಸಿರುವ ಉಪೇಂದ್ರ ಸದ್ಯಕ್ಕೆ 'ಕನ್ನೇಶ್ವರ' ಸಿನೆಮಾ ಪ್ರಾರಂಭಿಸಬೇಕಿದೆ. ನಂತರ ಮಂಜು ಮಾಂಡವ್ಯ ಮತ್ತು ಶಶಾಂಕ್ ಅವರ ಚಿತ್ರಗಳಲ್ಲೂ ಉಪೇಂದ್ರ ನಟಿಸಲಿದ್ದಾರೆ. 
ಉಪೇಂದ್ರ ಎದುರು ನಟಿಸಲು ಮೊದಲ ಬಾರಿಗೆ ರಚಿತಾ ರಾಮ್ ಅವರನ್ನು ಮಾದೇಶ್ ನಿರ್ದೇಶನದ ಚಿತ್ರತಂಡ ಆಯ್ಕೆ ಮಾಡಿದೆ. ರಚಿತಾ ಕೂಡ 'ಪುಷ್ಪಕ ವಿಮಾನ' ಬಿಡುಗಡೆಗೆ ಕಾಯುತ್ತಿದ್ದು 'ಭರ್ಜರಿ' ಸಿನೆಮಾದ ಹಾಡುಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 
ಇನ್ನು ಹೆಸರಿಡದ ಮಾದೇಶ್ ಚಿತ್ರವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಿಸುತ್ತಿದ್ದು, ಸಾಧು ಕೋಕಿಲಾ ಅವರ ಸಂಗೀತ ಮತ್ತು ರಾಜೇಶ್ ಕಟ್ಟಾ ಅವರ ಸಿನೆಮ್ಯಾಟೋಗ್ರಫಿ ಇರಲಿದೆ. ಎಂ ಎಸ್ ರಮೇಶ್ ಸಂಭಾಷಣೆ ಬರೆಯಲಿದ್ದು, ಕೆ ಎಂ ಪ್ರಕಾಶ್ ಸಂಕಲನಕಾರ. 
SCROLL FOR NEXT