ಬೆಂಗಳೂರು: ಅಮೀರ್ ಖಾನ್ ನಟನೆಯ 'ದಂಗಾಲ್' ಚಿತ್ರ ಬಿಡುಗಡೆಯಾದ ಮೊದಲ ಮೂರೂ ದಿನಗಳಲ್ಲೇ ಬಾಕ್ಸ್ ಆಫಿಸ್ ನಲ್ಲಿ ೧೦೦ ಕೋಟಿಗೂ ಹೆಚ್ಚು ಗಳಿಕೆ ಕಂಡು, ಪ್ರೇಕ್ಷಕರು ಮತ್ತು ವಿಮರ್ಶಕರ ನಡುವೆ ಸಮಾನ ಮೆಚ್ಚುಗೆ ಗಳಿಸಿದ ಚಿತ್ರ.
ಆದರೆ ಕುಸ್ತಿಪಟು ಗೀತಾ ಫೋಗಟ್ ಅವರ ತರಬೇತುದಾರ ಪಿಆರ್ ಸೋಂಧಿ ಅವರಿಗೆ ಸಿನೆಮಾ ಖುಷಿ ತಂದಿಲ್ಲ. ಮಹಾವೀರ್ ಫೋಗಟ್ ಮತ್ತು ಅವರ ಪುತ್ರಿಯರಾದ ಗೀತಾ ಮತ್ತು ಬಬಿತಾ ಅವರ ಜೀವನ ಚಿತ್ರಣವಾದ ಈ ಸಿನೆಮಾದಲ್ಲಿ, ತರಬೇತುದಾರರನ್ನು ಖಳನಾಯಕನನ್ನಾಗಿ ಚಿತ್ರಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪೋರ್ಟ್ಸ್ ಕೀಡ ಮಾಡಿರುವ ವರದಿಯ ಪ್ರಕಾರ "ಮಹಾವೀರ್ ಫೋಗಟ್ ಬಹಳ ಸಭ್ಯ ಮನುಷ್ಯನಾಗಿರುವುದರಿಂದ ಇಂತಹ ವಿಷಯಗಳನ್ನು ನಿರ್ದೇಶಕರಿಗೆ ಹೇಳಿರಲು ಸಾಧ್ಯವಿಲ್ಲ. ನಾನಿನ್ನು ಸಿನೆಮಾ ನೋಡಿಲ್ಲ, ಆದರೆ ನನ್ನ ವಿದ್ಯಾರ್ಥಿಗಳು ತಿಳಿಸಿರುವಂತೆ ನಾನು ಮಾಡದೆ ಇರುವ ಸಂಗತಿಗಳನ್ನೆಲ್ಲಾ ಚಿತ್ರಿಸಲಾಗಿದೆಯಂತೆ. ಮೊದಲಿಗೆ ಜಾರ್ಜಿಯಾದ ವಿದೇಶಿ ಕೋಚ್ ಸೇರಿದಂತೆ ಐದು ಜನ ತರಬೇತುದಾರರಿದ್ದರು, ಆದರೆ ನಾನೊಬ್ಬನೇ ಇದ್ದೆನೆಂದು ಚಿತ್ರಿಸಿರುವುದೇಕೆ?"
ಹಾಗೆಯೇ ೨೦೧೦ರ ಕಾಮನ್ ವೆಲ್ತ್ ಕ್ರೀಡಾಕೂಟದ, ಗೀತಾ ಫೋಗಟ್ ಕುಸ್ತಿಯ ವೇಳೆಯಲ್ಲಿ ಅವರ ತಂದೆ ಮಹಾವೀರ್ ಅವರನ್ನು ತರಬೇತುದಾರ ಕೂಡಿಹಾಕಿದ್ದರು ಎಂದು ಚಿತ್ರಿಸಿರುವುದು ಸತ್ಯಕ್ಕೆ ದೂರ ಎಂದಿರುವ ಅವರು, ಸಿನೆಮಾಗೆ ಮಸಾಲ ಸೇರಿಸಲು ಮತ್ತೊಬ್ಬರ ವ್ಯಕ್ತಿತ್ವಕ್ಕೆ ಮಸಿಬಳಿಯುವುದು ಸರಿಯಲ್ಲ ಎಂದಿದ್ದಾರೆ.
ಲುಧಿಯಾನಾದಲ್ಲಿ ಈ ಸಿನೆಮಾ ಬಗ್ಗೆ ಅಮೀರ್ ಖಾನ್ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿದ್ದೆ ಎಂದು ತಿಳಿಸುವ ಸೋಂಧಿ, ಸಿನೆಮಾದ ಕ್ಲೈಮ್ಯಾಕ್ಸ್ ಬಗ್ಗೆ ನನಗೆ ತಿಳಿಸಿರಲಿಲ್ಲ. ನಿರ್ದೇಶಕ ತಮ್ಮ ಬಗ್ಗೆ ಕಾಲ್ಪನಿಕ ದೃಶ್ಯಗಳನ್ನು ಚಿತ್ರಿಸಿದ್ದಾರೆ ಎಂದು ದೂರಿದ್ದಾರೆ.
"ಅವರು ಮಸಾಲೆ ಸೇರಿಸಿದರು, ಆದರೆ ನಡೆದಿದ್ದನ್ನು ಅವರು ತಿಳಿಸಲಿಲ್ಲ. ಎಲ್ಲವು ಸುಸೂತ್ರವಾಗಿತ್ತು ಆದರೆ ನಿಜ ಅಂಶಗಳನ್ನು ತಿರುಚಿರುವುದು ನನ್ನ ಗೌರವಕ್ಕೆ ಧಕ್ಕೆ ತಂದಿದೆ. ನನ್ನ ಕೆಲಸ, ನಾನು ರಾಷ್ಟ್ರೀಯ ಕುಸ್ತಿ ತರಬೇತುದಾರನಾಗುವುದಕ್ಕೆ ಸಹಕರಿಸಿದೆ. ನಾನು ಸಿನೆಮಾ ನೋಡಿ, ಗಂಭೀರ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತೇನೆ" ಎಂದಿದ್ದಾರೆ ಸೋಂಧಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos