ಸಿನಿಮಾ ಸುದ್ದಿ

ಅಯ್ಯೋ, ಶಿವನೇ! ಇಲ್ಲಿರುವುದು ಯಾರು ಗೊತ್ತಾ?

Vishwanath S

ಇಲ್ಲಿರುವ ಫೋಟೋಗಳನ್ನು  ನೋಡಿದಾಗ ತಮಿಳು ನಟ ಆರ್ಯ ನಟಿಸಿದ 'ನಾನ್ ಕಡವುಳ್' ಚಿತ್ರದ ದೃಶ್ಯದಂತೆ ಕಾಣಬಹುದು. ಅಥವಾ ಅದೇ ಚಿತ್ರದ ಪಾರ್ಟ್-2 ಅಂತ ಬೇಕಾದರೂ ಕಲ್ಪನೆ ಜೋಡಿಸಿಕೊಳ್ಳಬಹುದೇನೋ. ಆದರೆ, ಅದ್ಯಾವುದೂ ಅಲ್ಲ. ಅಘೋರಿ ಗ್ಯಾಂಗ್‍ನಿಂದ ತಪ್ಪಿಸಿಕೊಂಡು ಬಂದವರಂತೆ ಕಾಣುತ್ತಿರುವ ಇವರು ಬೇರ್ಯಾರೂ ಅಲ್ಲ, ಗೀತರಚನೆಕಾರ ಹೃದಯಶಿವ!

'ಅಯ್ಯೋ ಶಿವನೇ' ಎಂದು ಅಚ್ಚರಿಯಾಗುವಂಥ ವೇಷ ಹಾಕಿರುವುದು ಸಿನಿಮಾದ ಪಾತ್ರಕ್ಕಾಗಿ ಎಂಬುದು ನಿಮ್ಮ ಗಮನಕ್ಕಿರಲಿ. ಅಂದಹಾಗೆ ಹೃದಯಶಿವ ಅವರೇ ನಿರ್ದೇಶನ ಮಾಡುತ್ತಿರುವ 'ಮಾತಂಗಿ' ಎನ್ನುವ ತಮಿಳು ಚಿತ್ರದ ಗೆಟಪ್ ಇದು. ಈ ಚಿತ್ರದಲ್ಲಿ ಹೃದಯಶಿವ ಅವರ ಪಾತ್ರದ ಹೆಸರು ಸೆಬಾಸ್ಟಿನ್. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಕನ್ನಡದಲ್ಲೂ 'ಮೊದಲ ಮಳೆ' ಹೆಸರಿನಲ್ಲಿ ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆಸಿಕೊಂಡಿದ್ದಾರೆ ಹೃದಯಶಿವ. ಈ ಚಿತ್ರಕ್ಕೆ ನೆನಪಿರಲಿ ಪ್ರೇಮ್ ಹಾಗೂ ಹರಿಪ್ರಿಯಾ ಜೋಡಿ. ತಮಿಳಿನಲ್ಲಿ 'ಮಾತಂಗಿ' ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿರುವ ಹೃದಯಶಿವ, ಈ ಚಿತ್ರದಲ್ಲಿ ವಿವಿಧ ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಇತ್ತೀಚೆಗಷ್ಟೆ ಪಾದ್ರಿ ವೇಷದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡವರು ಈಗ ನೋಡಿದರೆ ಅಘೋರಿಯಾಗಿದ್ದಾರೆ. 'ಈ ಚಿತ್ರದ ಹೆಸರೇ ಮಾತಂಗಿ. ಹೆಸರಿನಲ್ಲೇ ಚಿತ್ರದ ಕೊಂಚ ಕತೆ. ಆ ಕತೆಗೆ ಸೂಕ್ತ ಎನಿಸುವಂಥ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಹಾಗೆ ನೋಡಿದರೆ ಈ ಅಘೋರಿ ಪಾತ್ರಕ್ಕೆ ತುಂಬಾ ವಿಶೇಷತೆ ಇದೆ. ನನಗೆ ಈ ಗೆಟಪ್ ಸೆಟ್ ಆಗುತ್ತದೆನ್ನುವಷ್ಟು ಮೇಕಪ್ ಕಲಾವಿದ ತಮ್ಮ ಕೌಶಲ್ಯ ಮೆರೆದಿದ್ದಾರೆ. ನನ್ನದೇ ನಿರ್ದೇಶನದ ಚಿತ್ರವಾದರೂ ಒಬ್ಬ ಪ್ರೇಕ್ಷಕನಾಗಿ ಚಿತ್ರದಲ್ಲಿನ ಈ ಪಾತ್ರದ ಬಗ್ಗೆ ನನಗೆ ಸಾಕಷ್ಟು ಕುತೂಹಲವಿದೆ' ಎನ್ನುತ್ತಾರೆ ನಟ, ನಿರ್ದೇಶಕ ಕಂ ಗೀತರಚನೆಕಾರ ಹೃದಯಶಿವ. ಇನ್ನು ಈ ಚಿತ್ರದಲ್ಲಿ ನಟಿ ಶುಭಾ ಪೂಂಜಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಅಘೋರಿ ವೇಷದಲ್ಲಿರುವ ಹೃದಯಶಿವ ತೆರೆ ಮೇಲೆ ಯಾವ ಕಮಾಲ್ ಮಾಡಲಿದ್ದಾರೆಂಬುದು ಚಿತ್ರ ಬಂದ ಮೇಲೆಯೇ ನೋಡಬೇಕಿದೆ.

SCROLL FOR NEXT