ನವದೆಹಲಿ: ದೇಶದ ಸಾಮಾನ್ಯ ಮನುಷ್ಯನಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಾಲಿವುಡ್ ನಟ ಇರ್ಫಾನ್ ಖಾನ್ ರಾಷ್ಟ್ರದ ರಾಜಕೀಯ ವ್ಯವಸ್ಥೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಇತ್ತೀಚೆಗಷ್ಟೇ ಬಿಹಾರದ ರಾಜಧಾನಿ ಪಾಟ್ನಾಗೆ ಭೇಟಿ ನೀಡಿದ ಸಮಯದಲ್ಲಿ ಇರ್ಫಾನ್ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಜೊತೆಗೆ ಸಂದರ್ಶನ ನಡೆಸಿದ್ದರು. ತಮ್ಮ ಮುಂದಿನ ಸಿನೆಮಾ 'ಮದಾರಿ'ಯ ಪ್ರಚಾರದ ಭಾಗವಾಗಿಯೂ ಇರುವ ಈ ನಡೆಯಲ್ಲಿ ಈಗ ನಟ ಕೇಜ್ರಿವಾಲ್ ಜೊತೆಗೆ ಚರ್ಚೆ ನಡೆಸಿದ್ದಾರೆ.
ಕೇಜ್ರಿವಾಲ್ ಜೊತೆಗೆ ನಡೆಸಿದ 30 ನಿಮಿಷಗಳ ಸಂದರ್ಶನದಲ್ಲಿ ಈ ವ್ಯವಸ್ಥೆಯ ಭಾಗವಾಗುವುದರ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಲಿವುಡ್ ಗೆ ರಫ್ತಾಗಿರುವ ಭಾರತದ ಜನಪ್ರಿಯ ನಟ ಎಂದೇ ಹೆಸರಾಗಿರುವ ಇರ್ಫಾನ್ ಟ್ವಿಟ್ಟರ್ ಮೂಲಕ ಅರವಿಂದ್ ಕೇಜ್ರಿವಾಲ್ ಜೊತೆಗೆ ಸಂದರ್ಶನ ಏರ್ಪಾಡು ಮಾಡಿಕೊಂಡಿದ್ದರು. ಸಂದರ್ಶನ ನಡೆಸಲು ನಟ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಕೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ನಟನ ಮನವಿಗೆ ಪ್ರತಿಕ್ರಿಯಿಸಿದ್ದರೆ, ಪ್ರಧಾನ ಮಂತ್ರಿಯವರ ಕಾರ್ಯಾಲಯ ಅಧಿಕೃತ ಪತ್ರ ಬರೆಯುವಂತೆ ಕೇಳಿದೆ.
ತಂದೆ-ಮಗನ ಸಂಬಂಧದ ಬಗೆಯ ಕಥೆಯನ್ನು ನಿರ್ವಹಿಸಿರುವ 'ಮದಾರಿ' ಸಿನೆಮಾದಲ್ಲಿ ಮಗನನ್ನು ಕಳೆದುಕೊಂಡ ಸಾಮಾನ್ಯ ಮನುಷ್ಯನ ಆಕ್ರೋಶವನ್ನು ಸೆರೆ ಹಿಡಿಯಲಾಗಿದೆ. ಜಿಮ್ಮಿ ಶೇರ್ಗಿಲ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಈ ಚಿತ್ರ ಜುಲೈ 22 ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos