ಸಿನಿಮಾ ಸುದ್ದಿ

ಚಿತ್ರೀಕರಣ ಮುಕ್ತಾಯದತ್ತ ದಾಪುಗಾಲು ಹಾಕಿದ 'ಪುಷ್ಪಕ ವಿಮಾನ'

Guruprasad Narayana

ಬೆಂಗಳೂರು: ರಮೇಶ್ ಅಭಿನಯದ 'ಪುಷ್ಪಕ ವಿಮಾನ' ಸಿನೆಮಾದ ನಿರ್ದೇಶಕ ಎಸ್ ರವೀಂದ್ರನಾಥ್ ಕೊನೆಯ ಹಂತದ ಚಿತ್ರೀಕರಣ ನಡೆಸಿದ್ದಾರೆ. ಇದಕ್ಕಾಗಿ ಮಂಗಳೂರಿಗೆ ತೆರಳಲಿರುವ ಚಿತ್ರತಂಡ ರಮೇಶ್ ಅರವಿಂದ್ ಮತ್ತು ಅವರ ಪುತ್ರಿಯ ಪಾತ್ರ ವಹಿಸಿರುವ ರಚಿತಾ ರಾಮ್ ನಡುವೆ ಭಾವನಾತ್ಮಕ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಲಿದೆಯಂತೆ. ಇದರ ನಂತರ ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆಯಂತೆ. "ನಾವು ಚಿತ್ರೀಕರಣದ ಮುಕ್ತಾಯದ ಹಂತಕ್ಕೆ ಬಂದಿದ್ದೇವೆ" ಎನ್ನುತ್ತಾರೆ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್.

ಟ್ರೇಲರ್ ಬಿಡುಗಡೆಯ ನಂತರ ನಿರೀಕ್ಷೆಗಳ ಮಹಾಪೂರವನ್ನೇ ಸೃಷ್ಟಿಸಿತ್ತು 'ಪುಷ್ಪಕ ವಿಮಾನ'. ರಮೇಶ್ ಅರವಿಂದ್ ಎಲ್ಲರಿಗೂ ಕಣ್ಣೀರು ತರಿಸುವಲ್ಲಿ ಸಫಲರಾಗಿದ್ದಾರೆ ಎನ್ನುವ ವಿಖ್ಯಾತ್ "ಸೆಟ್ ನಲ್ಲೇ ಕಣ್ಣುಗಳು ತೇವವಾಗುತ್ತಿದ್ದವು. ರಮೇಶ್ ಜೊತೆಗಿನ ಚಿತ್ರೀಕರಣದ ವೇಳೆಯಲ್ಲಿ ರಚಿತಾ ರಾಮ್ ಅವರೇ ಭಾವನಾತ್ಮಕವಾಗಿ ಕಂಡುಬಂದರು. ಒಂದು ದೃಶ್ಯದ ಚಿತ್ರೀಕರಣದ ನಂತರ ಫೋನ್ ಹಿಡಿದು ಹೊರನಡೆದ ರಚಿತಾ ತಮ್ಮ ತಂದೆಯ ಜೊತೆ ಮಾತನಾಡಿದರು. ರಮೇಶ್ ಇರುವ ಪ್ರತಿ ದೃಶ್ಯದಲ್ಲು ಇದೇ ಅನುಭವವಾಗುತ್ತಿದೆ. ಇದು ಉತ್ಪ್ರೇಕ್ಷೆಯಲ್ಲ. ನಟನ ೧೦೦ನೆ ಸಿನೆಮಾ ಇದು ಖಂಡಿತಾ ಮೈಲಿಗಲ್ಲಾಗುತ್ತದೆ" ಎನ್ನುತ್ತಾರೆ.

ವಿಖ್ಯಾತ್ ಪಿಕ್ಚರ್ಸ್ ಮತ್ತು ಒಡೆಯರ್ ಫ್ಯಾಕ್ಟರಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಾಲನಟಿ ಯುವಿನಾ ಪಾರ್ಥವಿ ನಟಿಸಿದ್ದಾರೆ. ಜುಲೈ ನಲ್ಲಿ ಸಿನೆಮಾ ಬಿಡುಗಡೆ ಮಾಡುವ ಭರವಸೆ ಹೊಂದಿದೆ ಚಿತ್ರತಂಡ.

SCROLL FOR NEXT