ಬೆಂಗಳೂರು: ಹೆಸರಿಗೆ ತಕ್ಕಂತೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ತಂಡ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಶರಣ್ ಮತ್ತು ಮಯೂರಿ ಜೊತೆಗೆ, ಯೆಲ್ಲಾಪುರ ಸುತ್ತಮುತ್ತ ನಡೆದ ಚಿತ್ರೀಕರಣದ ವೇಳೆಯಲ್ಲಿ ೧೨೫ ಕಿಮೀ ದೂರ ನಡೆದೇ ಕ್ರಮಿಸಿದ್ದಾರಂತೆ!
"ಆಡುಭಾಷೆಯಲ್ಲಿ ನಟರಾಜ ಸರ್ವಿಸ್ ಎಂದರೆ ನಡೆಯುವುದು ಎಂದರ್ಥ. ಚಿತ್ರೀಕರಣದ ವೇಳೆಯಲ್ಲಿ ನಾವೂ ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾಯಿತು" ಎನ್ನುವ ನಿರ್ದೇಶಕ ೨೦ ದಿನಗಳಲ್ಲಿ ೧೨೫ ಕಿಲೋ ಮೀಟರ್ ದೂರವನ್ನು ನಡೆದಿರುವುದಾಗಿ ತಿಳಿಸುತ್ತಾರೆ. "ಈ ಪ್ರದೇಶಗಳಲ್ಲಿ ಪ್ರಯಾಣ ವ್ಯವಸ್ಥೆಗೆ ವಾಹನಗಳು ಸಿಗುವುದು ಕಷ್ಟವಾಗಿರುವುದರಿಂದ ಬೇರೆ ಬೇರೆ ಜಾಗಗಳಿಗೆ ನಡೆದೇ ಹೋಗಬೇಕಾಯಿತು" ಎನ್ನುತ್ತಾರೆ ಪವನ್.
ಈಗ ಮಾತುಕತೆಯ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಗೆ ಚಿತ್ರತಂಡ ಅಣಿಯಾಗುತ್ತಿದೆ. ಇವೆಲ್ಲವೂ ಬೆಂಗಳೂರಿನಲ್ಲಿಯೇ ಜರುಗಲಿದೆಯಂತೆ.
'ಜೆಸ್ಸಿ' ನಂತರ ಪವನ್ ಒಡೆಯರ್ ಈ ಸಿನೆಮಾ ನಿರ್ದೇಶಿಸುತ್ತಿದ್ದು ಇದು ಹಾಸ್ಯಚಿತ್ರವಾಗಿದೆ.