ಬೆಂಗಳೂರು: 'ಕನ್ನೇಶ್ವರ' ಸಿನಿಮಾಗಾಗಿ ಉಪೇಂದ್ರ ಮತ್ತು ನಾಗಣ್ಣ ಒಂದಾಗಿದ್ದಾರೆ. ಈ ಸಿನೆಮಾಗೆ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'A' ಸಿನೆಮಾ ನಿರ್ಮಿಸಿದ್ದ ಬಿ ಜಗನ್ನಾಥ್ ಅವರ ಪುತ್ರ ರಜ್ಜಿ ಜಗನ್ನಾಥ್ ನಿರ್ಮಾಪಕ.
ಇದಕ್ಕೂ ಮುಂಚಿತವಾಗಿ ನಿಗದಿಯಾದಂತೆ ಈ ಸಿನೆಮಾ ಜನವರಿಯಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಈಗ ನವೆಂಬರ್ ೧೦ ಕ್ಕೆ ಮುಹೂರ್ತ ನಡೆದಿದೆ ಎಂದು ತಿಳಿದುಬಂದಿದೆ. ಒಂದು ವಾರದ ನಂತರ ಚಿತ್ರೀಕರಣ ಪ್ರಾರಂಭಗೊಂಡು, ನಂತರ ವಿರಾಮ ತೆಗೆದುಕೊಂಡು ಜನವರಿಯಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭಿಸಲಿದೆಯಂತೆ.
ನಿರ್ಮಾಪಕ ರಜ್ಜಿ ಅವರ ಕೋರಿಕೆಯಂತೆ ಈ ಬದಲಾವಣೆ ಆಗಿದೆಯಂತೆ. ಜಗನ್ನಾಥ್ ಅವರ ಹುಟ್ಟುಹಬ್ಬದ ದಿನ ಈ ಹೊಸ ಸಿನೆಮಾವನ್ನು ಪ್ರಾರಂಭ ಮಾಡುವುದು ಅವರ ಇರಾದೆಯಾಗಿತ್ತಂತೆ. ಇದು ಉಪೇಂದ್ರ ಅವರ ಬ್ಲಾಕ್ ಬಸ್ಟರ್ ಸಿನೆಮಾ 'A' ಜೊತೆಗಿನ ಭಾವನಾತ್ಮಕ ಸಂಬಂಧವಾಗಿರುವುದರಿಂದ ನಟ ಈ ಬದಲಾವಣೆಗೆ ಓಗೊಟ್ಟಿದ್ದಾರೆ. ಆದುದರಿಂದ ತಮ್ಮ ಕಾರ್ಯನಿರತ ಚಟುವಟಿಕೆಗಳ ನಡುವೆಯೂ, ಇದಕ್ಕೆ ಅವಕಾಶ ನೀಡಿದ್ದಾರಂತೆ.
ವೇದಿಕಾ ಅವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿದ್ದು, ಪ್ರಮುಖ ಪಾತ್ರವೊಂದಕ್ಕೆ ರವಿಚಂದ್ರನ್ ಅವರನ್ನು ಕರೆತರಲು ಕೂಡ ನಿರ್ಮಾಪಕ ಸಜ್ಜಾಗಿದ್ದಾರೆ.
ಈಮಧ್ಯೆ ಎನ್ ಲೋಕನಾಥ್ ನಿರ್ದೇಶನದ 'ಉಪೇಂದ್ರ ಮತ್ತೆ ಹುಟ್ಟಿ ಬಾ- ಇಂತಿ ನಿನ್ನ ಪ್ರೇಮ' ಸಿನೆಮಾದಲ್ಲೂ ಉಪೇಂದ್ರ ಬ್ಯುಸಿಯಾಗಿದ್ದಾರೆ. ನಂತರ ಉದಯ್ ಪ್ರಕಾಶ್ ನಿರ್ದೇಶನದ 'ಡಾ. ಮೋದಿ' ಮೂಲಕ ಮುಂದುವರೆಯಲಿದ್ದಾರೆ.