ಸಿನಿಮಾ ಸುದ್ದಿ

ಹೃದಯಾಗೆ ನಟನೆಯ ಮರುಜೀವ ನೀಡಲಿರುವ 'ತ್ರಾತಕ'

Guruprasad Narayana
ಬೆಂಗಳೂರು: ಸುಮಾರು ಆರು ವರ್ಷಗಳ ಹಿಂದೆ ಹೃದಯ 'ಒರಟ ಐ ಲವ್ ಯು' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಸ್ವಯಂಪ್ರೇರಿತವಾಗಿ ನಟನೆಯಿಂದ ದೂರವುಳಿದಿದ್ದವರು. ಆ ಸಿನೆಮಾದ ನಿರ್ಮಾಪಕರು ಚಿತ್ರರಂಗಕ್ಕೆ ಅವರನ್ನು 'ಸೌಮ್ಯ' ಎಂದು ಪರಿಚಯಿಸಿದ್ದರು. ಈ ನಿರ್ದೇಶಕ ಶಿವ ಗಣೇಶ ಅವರ 'ತ್ರಾತಕ' ಸಿನೆಮಾದ ಮೂಲಕ ತಮ್ಮ ನಟನೆಯ ಮರುಪ್ರಯಾಣವನ್ನು ಪ್ರಾರಂಭಿಸಲು ನಟಿ ಸಿದ್ಧರಾಗಿದ್ದಾರೆ. ಇದು ತನಿಖಾ ಥ್ರಿಲ್ಲರ್ ಅಂತೆ!
ಸಿನೆಮಾರಂಗದಿಂದ ಕಾಣೆಯಾಗಿದ್ದೇಕೆ ಎಂದು ವಿವರಿಸುವ ಹೃದಯ "ನಾನು 'ಒರಟ ಐ ಲವ್ ಯು' ಮಾಡಿದಾಗ ಮೊದಲ ವರ್ಷದ ಪಿಯುಸಿ ವ್ಯಾಸಂಗ ಪ್ರಾರಂಭಿಸಿದ್ದೆ. ನಾನು ಮೊದಲು ವಿದ್ಯಾಭ್ಯಾಸ ಮುಗಿಸಿ ನಂತರ ನಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಪೋಷಕರ ಬಯಕೆಯಾಗಿತ್ತು. ನಂತರ ಮೊದಲ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸದಲ್ಲಿ ನಿರತಳಾದೆ. ಆಮೇಲೆ ನೃತ್ಯ ಮತ್ತು ಫಿಟ್ ನೆಸ್ ತರಬೇತಿಗಳಿಗೆ ಹೋದೆ. ಈ ಮಧ್ಯೆ ನನಗೆ ಹಲವು ಅವಕಾಶಗಳು ಹುಡುಕಿ ಬಂದವು. ಆದರೆ ನಾನು ಕೇಳಿದ ಸ್ಕ್ರಿಪ್ಟ್ ಗಳಲ್ಲೆಲ್ಲಾ ಆಪ್ತವಾದದ್ದು ಶಿವ ಗಣೇಶ್ ಅವರ ಚಿತ್ರ. ಅದಕ್ಕೆ ಅದನ್ನು ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ. 
ಈ ಥ್ರಿಲ್ಲರ್ ನಲ್ಲಿ ಹೃದಯ ಸೈಕಿಯಾಟ್ರಿಸ್ಟ್ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಈ ಹಿಂದೆ ಸುನಿಲ್ ಕುಮಾರ್ ದೇಸಾಯಿ ಸಿನೆಮಾದಲ್ಲಿ ನಟಿಸಿದ್ದ ರಾಹುಲ್ ಐನಾಪುರ್ ಕೂಡ ಮತ್ತೆ ನಟಿಸಲಿದ್ದಾರಂತೆ. ಅಜಿತ್ ಜಯರಾಜ್ ಕೂಡ ಮತ್ತೊಬ್ಬ ನಾಯಕ ನಟ. 
SCROLL FOR NEXT