ಸಿನಿಮಾ ಸುದ್ದಿ

'ಸಿಂಪಲ್' ಸುನಿ ನಿರ್ದೇಶನದಲ್ಲಿ ಸಿನೆಮಾ ನಿರ್ಮಿಸಲು ಮುಂದಾದ 'ಗೋಧಿ ಬಣ್ಣ...' ನಿರ್ಮಾಪಕ

Guruprasad Narayana
ಬೆಂಗಳೂರು: ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಈಗ ಹಾಸ್ಯ ಸಿನಿಮಾದತ್ತ ಚಿತ್ತ ಹರಿಸಿದ್ದಾರೆ. ಅವರು ಸಿಂಪಲ್ ಸುನಿ ಅವರ ಮೊರೆ ಹೋಗಿರುವುದು ವಿಶೇಷ. 
2013 ರ ಹಿಟ್ ಸಿನೆಮಾ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ'ಯ ನಿರ್ದೇಶಕ ಸುನಿಲ್ ಕುಮಾರ್, ಸಿಂಪಲ್ ಸುನಿ ಎಂದೇ ಪರಿಚಿತರು. ಪುಷ್ಕರ್ ನಿರ್ಮಾಣದ ಮುಂದಿನ ಚಿತ್ರಕ್ಕೆ ಸ್ಕ್ರಿಪ್ಟ್ ಈಗಾಗಲೇ ಸಿದ್ಧವಾಗಿದ್ದು ನವೆಂಬರ್ ಅಂತ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ತಾರಾಗಣ ಇನ್ನೂ ಅಂತಿಮವಾಗಬೇಕಿದ್ದು, ಮುಖ್ಯ ಪಾತ್ರಕ್ಕೆ ಅನಂತನಾಗ್ ಅವರನ್ನು ಕೇಳಿಕೊಳ್ಳುವ ಸಾಧ್ಯತೆ ಇದೆ. "ಈ ಒಂದು ಪಾತ್ರ ಅನಂತನಾಗ್ ಅವರಿಗಾಗಿಯೇ ಬರೆದಿರುವುದು" ಎನ್ನುತ್ತಾರೆ ಪುಷ್ಕರ್.
"ನಾವಿನ್ನು ಅವರ ಬಳಿ ತೆರಳಿ ಕಥೆ ಹೇಳಬೇಕಿದೆ. ಈ ಸಿನೆಮಾದಲ್ಲಿ ತೀವ್ರ ಹಾಸ್ಯದ ಜೊತೆಗೆ ಭಾವನಾತ್ಮಕ ಅಂಶಗಳು ಅಷ್ಟೇ ತೀವ್ರತೆಯಿಂದ ಕೂಡಿರುತ್ತವೆ" ಎನ್ನುತ್ತಾರೆ ನಿರ್ಮಾಪಕ. 
"'ಗೋಧಿ ಬಣ್ಣ.....' ಸಿನೆಮಾದ ಕೆಲವು ತಂತ್ರಜ್ಞರನ್ನು ಈ ಸಿನಿಮಾದಲ್ಲಿಯೂ ಉಳಿಸಿಕೊಳ್ಳುವ ಚಿಂತನೆ ನಡೆಸಿದ್ದು, ಇನ್ನು ಹೆಸರಿಡದ ಈ ಸಿನೆಮಾದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಕೆಲಸ ಮಾಡಲಿದ್ದಾರೆ" ಎನ್ನುವ ಪುಷ್ಕರ್ "ಬಹುತೇಕ ತಾರಾಗಣದಲ್ಲಿ ಹೊಸಬರನ್ನು ಪರಿಚಯಿಸುವ ಇರಾದೆ ಇದ್ದು, ಸೆಪ್ಟೆಂಬರ್ ಅಂತ್ಯದಲ್ಲಿ ಆಡಿಶನ್ ಮಾಡಲಿದ್ದೇವೆ" ಎನ್ನುತ್ತಾರೆ. 
ಸದ್ಯಕ್ಕೆ ಸುನಿ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಳಿಸಿದ್ದು ಚಿತ್ರೀಕರಣ ನಂತರದ ಕೆಲಸಗಳು ಭರದಿಂದ ಸಾಗಿವೆ. ಈ ಸಿನೆಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ಮನೀಶ್ ರಿಷಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
SCROLL FOR NEXT