ಸೌಂದರ್ಯ ರಜನಿಕಾಂತ್-ಅಶ್ವಿನ್ ಕುಮಾರ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ದ್ವಿತೀಯ ಪುತ್ರಿ ಸೌಂದರ್ಯ ಮತ್ತು ಅವರ ಪತಿ ಅಶ್ವಿನ್ ಕುಮಾರ್ ದಾಂಪತ್ಯ ಜೀವನದಿಂದ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್ ನಲ್ಲಿ ಕೇಳಿಬರುತ್ತಿದೆ.
ಕೈಗಾರಿಕೋದ್ಯಮಿ ಅಶ್ವಿನ್ ಅವರನ್ನು ಸೌಂದರ್ಯ 2010ರಲ್ಲಿ ಮದುವೆಯಾಗಿದ್ದರು. 4 ವರ್ಷಗಳ ಕಾಲ ಪ್ರೀತಿಸಿ ಒಂದಾಗಿದ್ದರು. ಇವರಿಗೆ ವೇದ್ ಎನ್ನುವ ಒಂದು ವರ್ಷದ ಮಗನಿದ್ದಾನೆ. ಕಳೆದ ಕೆಲ ಸಮಯಗಳಿಂದ ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು ಒಂದಾಗಿ ಬಾಳಲು ಸಾಧ್ಯವಾಗದ ಕಾರಣ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.
ಮೂತ್ರಪಿಂಡದ ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಿದ್ದ ರಜನಿಕಾಂತ್ ಚೆನ್ನೈಗೆ ವಾಪಸಾದ ನಂತರ ಮಗಳು ಸೌಂದರ್ಯಾ ಜೊತೆಗೆ ಸ್ವಲ್ಪ ದಿನ ವಾಸವಿದ್ದು ದಂಪತಿಗಳ ಮಧ್ಯೆ ರಾಜಿ ಮಾಡಲು ಪ್ರಯತ್ನಿಸಿದ್ದರು. ಭಿನ್ನಾಭಿಪ್ರಾಯಗಳನ್ನು ಮರೆತು ಒಂದು ಮಾಡಲು ಮುಂದಾಗಿದ್ದರಂತೆ. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ. ಕಾನೂನಾತ್ಮಕವಾಗಿ ದೂರವಾಗಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರಂತೆ ಎಂಬ ಸುದ್ದಿ ಕೇಳಿಬರುತ್ತಿದೆ.
ಈ ಬಗ್ಗೆ ಅಶ್ವಿನ್ ಅವರನ್ನು ಕೇಳಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಗ್ರಾಫಿಕ್ ವಿನ್ಯಾಸಗಾರ್ತಿಯಾಗಿ ತಮ್ಮ ವೃತ್ತಿ ಆರಂಭಿಸಿದ ಸೌಂದರ್ಯಾ ನಂತರ ಚಿತ್ರ ನಿರ್ದೇಶಕಿಯೂ ಆದರು. ತಮ್ಮ ತಂದೆ ರಜನಿಕಾಂತ್ ಅಭಿನಯದ ಕೊಚಾಡಿಯಾನ್ ಚಿತ್ರವನ್ನು ನಿರ್ದೇಶಿಸಿದ್ದರು.
ಇತ್ತೀಚಿನ ರಜನಿಕಾಂತ್ ಚಿತ್ರ ಕಬಾಲಿಯಲ್ಲಿ ರಜನಿಕಾಂತ್ ಅವರಿಗೆ ನಿರ್ದೇಶಕ ಪಾ ರಂಜಿತ್ ಅವರನ್ನು ಪರಿಚಯಿಸಿದ್ದು ಸೌಂದರ್ಯಾ ಅವರೇ. ಇದೀಗ ತಮ್ಮ ಮುಂದಿನ ರೊಮ್ಯಾಂಟಿಕ್ ಕಾಮಿಡಿ ಚಿತ್ರದ ನಿರ್ದೇಶನದಲ್ಲಿ ಸೌಂದರ್ಯಾ ಬ್ಯುಸಿಯಾಗಿದ್ದಾರೆ.
ಅವರ ವಿಚ್ಛೇದನದ ಬಗ್ಗೆ ಕೇಳಿಬರುತ್ತಿರುವ ಸುದ್ದಿ ನಿಜವಾಗದಿರಲೆಂಬ ಆಕಾಂಕ್ಷೆ ಅವರ ಅಭಿಮಾನಿಗಳದ್ದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos