ಬೆಂಗಳೂರು: ಪ್ರಖ್ಯಾತ ಹೀರೋಗಳನ್ನು ಲೀಲಾಜಾಲವಾಗಿ ತಮ್ಮ ಸಿನೆಮಾಗಳಲ್ಲಿ ತೊಡಗಿಸಿಕೊಳ್ಳುವ ನಿರ್ದೇಶಕ ಪ್ರಕಾಶ್, ವಿಜಯ್ ರಾಘವೇಂದ್ರ, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಮುಂತಾದ ಜನಪ್ರಿಯ ನಟರನ್ನು ನಿರ್ದೇಶಿಸಿದವರು. ಈಗ ಅವರ ಮುಂದಿನ ಚಿತ್ರಕ್ಕೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಹೆಸರಿಡದ ಈ ಕೌಟಂಬಿಕ ಡ್ರಾಮಾ ಚಿತ್ರಕ್ಕೆ ಮೊದಲ ಬಾರಿಗೆ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ತಮ್ಮ ಸಹೋದರ ಸಂಬಂಧಿ ಕೆ ಎಸ್ ದುಷ್ಯಂತ್ ನಿರ್ಮಿಸುತ್ತಿರುವುದಾಗಿ ತಿಳಿಸುವ ಪ್ರಕಾಶ್ "ಅವರು ಈ ಹಿಂದೆ ನನಗಾಗಿ 'ಮಿಲನ' ಮತ್ತು 'ಶ್ರೀ' ನಿರ್ಮಿಸಿದ್ದರು. ಅವರ ಜೊತೆಗೆ ಇದು ನನ್ನ ಮೂರನೇ ಯೋಜನೆ" ಎನ್ನುತ್ತಾರೆ.
ನವೆಂಬರ್ ನಿಂದ ಚಿತ್ರೀಕರಣಗೊಳ್ಳಲಿರುವ ಈ ಸಿನೆಮಾಗೆ ತಾರಾಗಣದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. "ಸದ್ಯಕ್ಕೆ 'ಚಕ್ರವರ್ತಿ' ಚಿತ್ರೀಕರಣಕ್ಕಾಗಿ ಮಲೇಷಿಯಾದಲ್ಲಿರುವ ದರ್ಶನ್ ಹಿಂದಿರುಗಿದ ನಂತರ ಕೊನೆಯ ಹಂತದ ಚಿತ್ರೀಕರಣ ಮುಗಿಸಲಿದ್ದಾರೆ. ನಂತರ ನಮ್ಮ ಚಿತ್ರತಂಡ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ ನಿರ್ದೇಶಕ.
ಸ್ಕ್ರಿಪ್ಟ್ ಈಗಾಗಲೇ ಸಿದ್ಧವಿದ್ದು, ಇದಕ್ಕೆ ದರ್ಶನ್ ಸೂಕ್ತ ನಟ ಎನ್ನುತ್ತಾರೆ ಪ್ರಕಾಶ್. ಈ ಸಿನೆಮಾದಲ್ಲಿ ಇಬ್ಬರು ಹೀರೋಯಿನ್ ಗಳು ನಟಿಸಲಿದ್ದಾರೆ ಎಂದು ಕೂಡ ತಿಳಿದುಬಂದಿದೆ.
"ವಿದೇಶದಲ್ಲಿ 25 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದೇವೆ. ಯಾವ ದೇಶ ಎಂದು ಇನ್ನು ನಿರ್ಧರಿಸಿಲ್ಲ. ಚಳಿಯಿಲ್ಲದ ಬಿಸಿಲಿರುವ ದೇಶವನ್ನು ಬಹುಷಃ ಆಯ್ಕೆ ಮಾಡಲಿದ್ದೇವೆ" ಎನ್ನುತ್ತಾರೆ ಪ್ರಕಾಶ್.