ಸಿನಿಮಾ ಸುದ್ದಿ

ಅಗತ್ಯ ಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನ ಮಾಡಲು ಸಿದ್ಧ: ನಟ ಇರ್ಫಾನ್ ಖಾನ್

Manjula VN
ಮುಂಬೈ: ಅತಿಯಾದ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ನಟ ವಿನೋದ್ ಖನ್ನಾ ಅವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹಾರೈಸಿರುವ ನಟ ಇರ್ಫಾನ್ ಖಾನ್ ಅವರು, ಅಗತ್ಯವೆನಿಸಿದರೆ ವಿನೋದ್ ಖನ್ನಾ ಅವರಿಗಾಗಿ ಅಂಗಾಂಗ ದಾನ ಮಾಡಲು ಸಿದ್ಧನಿದ್ದೇನೆಂದು ಶುಕ್ರವಾರ ಹೇಳಿದ್ದಾರೆ. 
ನಿರ್ಜಲೀಕರಣದಿಂದ ಬಳಲುತ್ತಿದ್ದ ವಿನೋದ್ ಖನ್ನಾ ಅವರು ಕಳೆದ ವಾರ ಸರ್ ಹೆಚ್'ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. 
ವಿನೋದ್ ಖನ್ನಾ ಆವರ ಆರೋಗ್ಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳ ಸುದ್ದಿಗಳು ಓಡಾಡುತ್ತಿವೆ. ಖನ್ನಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. 
ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿನೋದ್ ಖನ್ನಾ ಅವರ ಫೋಟೋವನ್ನು ನೋಡಿರುವ ಇರ್ಫಾನ್ ಖಾನ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 
ಈ ಬಗ್ಗೆ 'ಹಿಂದಿ ಮೀಡಿಯಂ' ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ವಿನೋದ್ ಖನ್ನಾ ಅವರ ಫೋಟೋವನ್ನು ನೋಡಿದೆ. ನಿಜಕ್ಕೂ ಆಘಾತವಾಯಿತು. ಅವರಿಗೆ ಉತ್ತಮ ಆರೋಗ್ಯ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಶೀಘ್ರಗತಿಯಲ್ಲಿ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅಗತ್ಯವೆನಿಸಿದರೆ, ವಿನೋದ್ ಖನ್ನಾ ಅವರಿಗಾಗಿ ಅಂಗಾಂಗ ದಾನ ಮಾಡಲು ನಾನು ಸಿದ್ಧನಿದ್ದೇನೆ. ಇಂಡಸ್ಟ್ರಿಯಲ್ಲಿ ವಿನೋದ್ ಖನ್ನಾ ಅವರು ಅತ್ಯಂತ ಸುಂದರವಾದ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ. 
SCROLL FOR NEXT