ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಉಮಾಪತಿ, ಸುದೀಪ್ ಅವರೊಂದಿಗೆ ಕೆಂಪೇಗೌಡ ೨ ಸಿನೆಮಾದಲ್ಲಿ ತೊಡಗಿಸಿಕೊಳ್ಳುತ್ತಿರುವುದಾಗಿ ಘೋಷಿಸಿದ್ದರು. 'ಹೆಬ್ಬುಲಿ' ನಂತರ ತಮ್ಮ ಸಹೋದರನೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ತಂದಿದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಹಿಂದೆ ಸುದೀಪ್ ನಟಿಸಿದ್ದ 'ಕೆಂಪೇಗೌಡ' ಸಿನೆಮಾದ ನಿರ್ಮಾಪಕ ಶಂಕ್ರೇ ಗೌಡ ಅವರೊಂದಿಗೆ ಇವೆಲ್ಲವೂ ಹೊಂದಾಣಿಕೆಯಾಗಿಲ್ಲ ಎಂದು ತಿಳಿದುವಂದಿದೆ.
ಕೆಂಪೇಗೌಡ ೨ ಶೀರ್ಷಿಕೆಯನ್ನು ನಿರ್ಮಾಪಕ ಶಂಕ್ರೇ ಗೌಡ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದು, ಅದನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಕೋಮಲ್ ಪ್ರಧಾನ ನಟನಾಗಿ ಈ ಸಿನೆಮಾ ನಿರ್ಮಿಸಲು ಮುಂದಾಗಿದ್ದು ಏಪ್ರಿಲ್ ೧೪ ಕ್ಕೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದೆ.
ಈಗ ಇದರಿಂದ ಎಚ್ಚೆತ್ತ ನಿರ್ಮಾಪಕ ಉಮಾಪತಿ 'ಹೆಬ್ಬುಲಿ ೨' ಶೀರ್ಷಿಕೆಯನ್ನು ತಮ್ಮ ಹೆಸರಿನಲ್ಲಿ ನೊಂದಾಯಿಸಿಕೊಂಡಿದ್ದು "ಸಣ್ಣ ವಿಷಯವನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ" ಎನ್ನುತ್ತಾರೆ.
"ನನಗೆ 'ಕೆಂಪೇಗೌಡ ೨' ಶೀರ್ಷಿಕೆ ಸಿಗುವುದಿಲ್ಲ ಎಂಬ ಸುಳಿವು ಸಿಕ್ಕ ಕೂಡಲೇ ಮತ್ತೊಂದು ಶೀರ್ಷಿಕೆಯನ್ನು ನೊಂದಾಯಿಸುವ ನಿರ್ಧಾರವನ್ನು ಕೂಡಲೇ ತೆಗೆದುಕೊಂಡೆ. ಇದು ಹೆಬ್ಬುಲಿಯ ಮುಂದುವರೆದ ಭಾಗವಾಗಲಿದೆ. ಶೀರ್ಷಿಕೆಯಿಂದಷ್ಟೇ ಸಿನೆಮಾಗಳು ಓದುವುದಿಲ್ಲ, ಸ್ಕ್ರಿಪ್ಟ್ ಕೂಡ ಮುಖ್ಯ. ನಮ್ಮ ಕೆಲಸ ಮಾತನಾಡಲಿದೆ" ಎನ್ನುತ್ತಾರೆ ಉಮಾಪತಿ.
ಕೆಂಪೇಗೌಡ ತಮಿಳು ಸಿನೆಮಾ 'ಸಿಂಗಂ'ನ ರಿಮೇಕ್ ಆಗಿತ್ತು. 'ಹೆಬ್ಬುಲಿ ೨ ' ಮಾಮೂಲಿ ಚಲನಚಿತ್ರವಾಗಿರುವುದಿಲ್ಲ ಎನ್ನುವ ಉಮಾಪತಿ, ಇದನ್ನು ಸುದೀಪ್ ಅವರೇ ನಿರ್ದೇಶಿಸಲಿದ್ದಾರೆ ಎಂದು ಕೂಡ ತಿಳಿಸುತ್ತಾರೆ. "ನಾವಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದಷ್ಟೇ ಹೇಳಬಲ್ಲೆ. ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ" ಎನ್ನುವ ಅವರು "ಸದ್ಯಕ್ಕೆ ಸುದೀಪ್ ಅವರು 'ದ ವಿಲನ್' ಸಿನೆಮಾದಲ್ಲಿ ಬ್ಯುಸಿಯಾಗಿರುವುದಲ್ಲದೆ ಇನ್ನಷ್ಟು ಸಿನೆಮಾಗಳು ಸಾಲಿನಲ್ಲಿವೆ. ಇವೆಲ್ಲವೂ ಮುಗಿದ ನಂತರವಷ್ಟೇ ನಮ್ಮ ಯೋಜನೆಯ ಬಗ್ಗೆ ಸ್ಪಷ್ಟತೆ ಸಿಗುವುದು" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos