ಬೆಂಗಳೂರು: ಕನ್ನಡದ 'ಮಾಸ್ ಹೀರೊ' ಎಂದೇ ಜನಪ್ರಿಯರಾದ ನಟ ದರ್ಶನ್ ಅವರ ಹೊಸ ಚಿತ್ರ 'ಚಕ್ರವರ್ತಿ' ನಾಳೆ ದೇಶದಾದ್ಯಂತ ಬಿಡುಗಡೆ ಕಾಣಲಿದೆ. ಸುಮಾರು ೪೫೦ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಈ ಸಿನೆಮಾ ದಾಖಲೆಗಳನ್ನು ಮುರಿಯುವತ್ತ ಮುಖ ಮಾಡಿದೆ.
ಭೂಗತ ದೊರೆಯಾಗಿ ಕಾಣಿಸಿಕೊಂಡಿರುವ ದರ್ಶನ್ ಅವರಿಗೆ ಇಂತಹ ಸಿನೆಮಾಗಳು ನಟನೆಗೆ ಹೆಚ್ಚು ಆಪ್ತವೆ ಎಂಬ ಪ್ರಶ್ನೆಗೆ ತಾತ್ವಿಕವಾಗಿ ಉತ್ತರಿಸುವ ನಟ "ಮನೆಗಿಂತಲೂ ದೇಶ ದೊಡ್ಡದು ಎಂದು ನಾವು ಈ ಸಿನೆಮಾದಲ್ಲಿ ತೋರಿಸಿದ್ದೇವೆ. ನಾವು ಸಾಮಾನ್ಯವಾಗಿ ನಮ್ಮ ಮನೆ-ಕುಟುಂಬಕ್ಕೆ ಸೀಮಿತವಾಗಿಬಿಡುತ್ತೇವೆ ಮತ್ತು ದೊಡ್ಡ ಚಿತ್ರಣವನ್ನು ಕಾಣುವದಿಲ್ಲ" ಎನ್ನುತ್ತಾರೆ.
ನಿರ್ಮಾಪಕ ಸಿದ್ಧಾಂತ್ ಮತ್ತು ನಿರ್ದೇಶಕ-ಗೆಳೆಯ ಚಿಂತನ್ ಅವರನ್ನು ನೆನಪಿಸಿಕೊಳ್ಳುವ ದರ್ಶನ್ "ಈ ಸಿನೆಮಾದ ಶ್ರೇಯಸ್ಸು ನನ್ನೊಬ್ಬನಿಗೆ ಸಲ್ಲುವುದಿಲ್ಲ. ಇದು ತಂಡದ ಕೆಲಸ. ಈ ಯೋಜನೆಯಲ್ಲಿ ಸಿದ್ಧಾಂತ್ ಮತ್ತು ಚಿಂತನ್ ನಾವು ಒಳ್ಳೆಯ ಕೆಲಸ ಮಾಡುವತ್ತ ಮುನ್ನಡೆಸಿದರು. ಚಿಂತನ್ ಅವರ ಕೆಲಸ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ ಮತ್ತು ಅವರ ಕೆಲಸದ ಬಗ್ಗೆ ಸ್ಪಷ್ಟತೆ ಇದೆ" ಎನ್ನುತ್ತಾರೆ.
ತಮ್ಮೆಲ್ಲಾ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎನ್ನುವ ದರ್ಶನ್ "ಈಗ ನಮ್ಮ ಜೊತೆ ಇಲ್ಲದ ಪತ್ರಕರ್ತ ವಿಜಯ್ ಸಾರಥಿಯವರನ್ನು ನಾನು ಯಾವಾಗಲೂ ನೆನೆಯುತ್ತಿರುತ್ತೇನೆ. ನನಗೆ 'ಬಾಕ್ಸ್ ಆಫೀಸ್ ಸುಲ್ತಾನ್' ಎಂಬ ಬಿರುದು ನೀಡಿದ್ದು ಅವರೇ. ಜನ ಆ ಬಿರುದನ್ನೂ ಮತ್ತೆ ಮತ್ತೆ ಪುನರುಚ್ಚರಿಸಿದ್ದರೂ, ಅವರೇ ಮೊದಲಿಗೆ ಆ ಬಿರುದು ನೀಡಿದ್ದು. ಅವರೇ ನನಗೆ ಮೊದಲು ಹರಸಿದ್ದು" ಎನ್ನುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಕಳೆದಿದ್ದರು, ಇಂತಹದ್ದೇ ಸಿನೆಮಾಗಳಲ್ಲಿ ನಟಿಸಬೇಕು ಎಂಬ ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ ಎನ್ನುವ ದರ್ಶನ್ "ನಾನು ನನ್ನ ಅಭಿಮಾನಿಗಳಿಗೆ ಅರ್ಪಿಸಿಕೊಂಡುಬಿಡುತ್ತೇನೆ. ಆದುದರಿಂದ ಅವರು 'ಮೆಜೆಸ್ಟಿಕ್' ನಂತಹ ಸಿನೆಮಾಗಳನ್ನು ನಾನು ಮಾಡಬೇಕೆಂದು ಬಯಸಿದರೆ ನಾನು ಮಾಡುತ್ತೇನೆ. ಇದೆ ಮನರಂಜನೆಯ ಮೌಲ್ಯ. ಸಿನೆಮಾ ಜನರಿಗೆ ತಮ್ಮ ಸಮಸ್ಯೆಗಳನ್ನು-ನೋವನ್ನು ಮರೆಯುವಂತೆ ಮಾಡಬೇಕು ಮತ್ತು ಕನಿಷ್ಠ ಎರಡು ವರೆ ಘಂಟೆಗಳ ಅವಧಿಗೆ ಅವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯಬೇಕು. ಪ್ರೇಕ್ಷಕರನ್ನು ಸಂತಸಪಡಿಸಿ ಅವರ ಮುಖದಲ್ಲಿ ನಗು ಮೂಡಿಸಲು ಸಾಧ್ಯವಾದರೆ ನಮ್ಮ ಕೆಲಸ ಸಾರ್ಥಕ" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos