ಬಿ ಆರ್ ಶೆಟ್ಟಿ, ಎಂ ಟಿ ವಾಸುದೇವನ್ ನಾಯರ್, ಮೋಹನ್ ಲಾಲ್ ಮತ್ತು ವಿ ಎ ಶ್ರೀಕುಮಾರ್
ಕೊಚ್ಚಿ: ಭಾರತದ ಅತಿ ದೊಡ್ಡ ಸಿನೆಮಾವಾಗಲಿರುವ 'ದ ಮಾಹಾಭಾರತ'ಕ್ಕೆ ಯುಎಇ ಮೂಲದ ಕನ್ನಡಿಗೆ ಉದ್ಯಮಿ ಬಿ ಆರ್ ಶೆಟ್ಟಿ ೧೦೦೦ ಕೋಟಿ ರೂ ಹೂಡಿಕೆ ಮಾಡಲಿದ್ದಾರೆ.
ಈ ಬೃಹತ್ ಸಿನೆಮಾವನ್ನು ಜಾಹಿರಾತು ಸಿನೆಮಾಗಳ ನಿರ್ದೇಶಕ ವಿ ಎ ಶ್ರೀಕುಮಾರ್ ನಿರ್ದೇಶಿಸಲಿದ್ದಾರೆ. ಇದು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಸೆಪ್ಟೆಂಬರ್ ೨೦೧೮ ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಮತ್ತು ೨೦೨೦ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗ, ಮೊದಲನೇ ಭಾಗ ಬಿಡುಗಡೆಯಾದ ೯೦ ದಿನಗಳ ನಂತರ ಬಿಡುಗಡೆಯಾಗಲಿದೆ.
"ಈ ಸಿನೆಮಾ ಪ್ರಾಥಮಿಕವಾಗಿ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ್ಲಲಿ ಚಿತ್ರೀಕರಣಗೊಳ್ಳುತ್ತಿದ್ದು, ನಂತರ ಪ್ರಮುಖ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಡಬ್ ಆಗಲಿದೆ" ಎಂದು ಉದ್ಯಮಿ ಬಿ ಆರ್ ಶೆಟ್ಟಿ ಒಡೆತನದ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಕರ್ ಪ್ರಶಸ್ತಿ ವಿಜೇತ ನಟರೂ ಸೇರಿದಂತೆ, ಭಾರತೀಯ ಸಿನೆಮಾ ರಂಗದ ಮತ್ತು ಹಾಲಿವುಡ್ ಸಿನೆಮಾ ನಟರು ಕೂಡ ಈ ಸಿನೆಮಾದಲ್ಲಿ ನಟಿಸಲಿದ್ದಾರೆ.
ಇದು ಮಲಯಾಳಂನ ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ ಟಿ ವಾಸುದೇವನ್ ನಾಯರ್ ಅವರ 'ರಂಡಮೂಳಮ್' ಪುಸ್ತಕದ ಸಿನೆಮಾ ಅಡವಳಿಕೆ ಆಗಲಿದೆ. ಭೀಮನ ದೃಷ್ಟಿಯಿಂದ ಮಹಾಭಾರತದ ಕಥೆ ಹೇಳುವ ಈ ಪುಸ್ತಕ ಬಹಳ ಪ್ರಸಿದ್ಧ ಮತ್ತು ಕನ್ನಡಕ್ಕೆ 'ಭೀಮಾಯಣ' ಎಂಬ ಹೆಸರಿನಲ್ಲಿ ಅನುವಾದವಾಗಿದೆ. ಸಿನೆಮಾಗೆ ಎಂ ಟಿ ವಿ ಅವರೇ ಸ್ಕ್ರೀನ್ ಪ್ಲೆ ಬರೆಯಲಿದ್ದಾರೆ.
ಯು ಎ ಇ ಎಕ್ಸ್ಚೇಂಜ್ ಮತ್ತು ಎನ್ಎಂಸಿ ಹೆಲ್ತ್ ಕೇರ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಬಿ ಆರ್ ಶೆಟ್ಟಿ ಹೇಳಿರುವಂತೆ ಇದು ನಿಜವಾದ 'ಮೇಕ್ ಇನ್ ಇಂಡಿಯಾ' ಉತ್ಪಾದನೆ ಎಂದಿದ್ದಾರೆ. "ಇದು ೧೦೦ ಭಾಷೆಗಳಲ್ಲಿ ಮೂಡಿ ಬರಲಿದೆ ಎಂದು ನನಗೆ ಭರವಸೆ ಇದೆ ಮತ್ತು ಇದು ವಿಶ್ವದಾದ್ಯಂತ ಮೂರು ಬಿಲಿಯನ್ ಜನರಿಗೆ ತಲುಪಲಿದೆ" ಎಂದು ಶೆಟ್ಟಿ ಹೇಳಿರುವುದಾಗಿ ಪತ್ರಿಕಾ ಹೇಳಿಕೆ ತಿಳಿಸಿದೆ.
ಮಲಯಾಳಂ ಖ್ಯಾತಾ ನಟ ಮೋಹನ್ ಲಾಲ್ ಕೂಡ ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos