ಬೆಂಗಳೂರು: ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ದಶರಥ' ಸಿನೆಮಾದ ಮೂಲಕ ಸುಮಾರು ೧೫ ವರ್ಷಗಳ ನಂತರ ನಟಿ ಸೋನಿಯಾ ಅಗರ್ವಾಲ್ ಕನ್ನಡ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಅವರ ಕೊನೆಯ ಮತ್ತು ಒಂದೇ ಕನ್ನಡ ಚಿತ್ರ 'ಚಂದು' ೨೦೦೨ರಲ್ಲಿ ಬಿಡುಗಡೆಯಾಗಿತ್ತು. ಸದರಿ ಸಿನೆಮಾದಲ್ಲಿ ರವಿಚಂದ್ರನ್ ಪುತ್ರಿಯ ಪಾತ್ರದಲ್ಲಿ ಮೇಘಶ್ರೀ ಕೂಡ ನಟಿಸುತ್ತಿದ್ದು, ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನೆಮಾದ ಚಿತ್ರೀಕರಣ ಏಪ್ರಿಲ್ ೧೫ ರಂದು ಪ್ರಾರಂಭವಾಗಿದ್ದು, ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.
'ದಶರಥ' ಸಿನೆಮಾದ ವಿಶೇಷತೆಯನ್ನು ತಿಳಿಸುವ ನಿರ್ದೇಶಕ ರಮೇಶ್ "ಇದು ರಾಮಾಯಣದ ಆಧುನಿಕ ಕಥೆ. ನಾನು ದಶರಥನ ಜೀವನ ಮತ್ತು ಋಷ್ಯಶೃಂಗನನ್ನು ಮದುವೆಯೆಯಾದ ಶಾಂತಳ ಮತ್ತೊಂದು ಬದಿಯನ್ನು ಈ ಆಧುನಿಕ ಕಥೆಯ ಮೂಲಕ ಅನ್ವೇಷಿಸಲಿದ್ದೇನೆ. ಸೀತೆ ರಾಮನ ಪರೀಕ್ಷೆಗಳನ್ನು ಎದುರಿಸಬೇಕಾಯಿತು ಎಂಬುದು ಗೊತ್ತಿರುವ ಸಂಗತಿ, ಶಾಂತದು ಕೂಡ ಅಂತಹುದ್ದೇ ಪರಿಸ್ಥಿತಿ ಮತ್ತು ನನ್ನ ಸಿನೆಮಾದಲ್ಲಿ ಅದನ್ನು ಚರ್ಚಿಸಲಿದ್ದೇನೆ" ಎನ್ನುತ್ತಾರೆ.