ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಸಾಂಸಾರಿಕ ಬದುಕಲ್ಲಿ ಹೊಸ ಬೆಳಕು ಮೂಡಿದೆ, ಗೌರಿ ಹಬ್ಬ ಕಿಚ್ಚ ಸುದೀಪ್ ಜೀವನದಲ್ಲಿ ಸಂತಸ ತಂದಿದೆ.
ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಟ ಸುದೀಪ್ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಾಪಸ್ ಪಡೆದಿದ್ದಾರೆ. ಮಗಳ ಭವಿಷ್ಯದ ಹಿತದೃಷ್ಟಿಯಿಂದ ಸುದೀಪ್ ದಂಪತಿ ವಿಚ್ಛೇದನ ಅರ್ಜಿ ವಾಪಸ್ಪಡೆದಿದ್ದಾರೆ ಎನ್ನಲಾಗಿದೆ.
ದಂಪತಿಯ ಮನವಿಯನ್ನು ಬೆಂಗಳೂರಿನಲ್ಲಿರುವ ಪ್ರಧಾನ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ.ಇಬ್ಬರ ನಡುವಿನ ವೈಮನಸ್ಯ ಬಗೆಹರಿದಿರುವುರಿಂದ ವಿಚ್ಛೇದನ ಕೇಸ್ ವಾಪಸ್ ಪಡೆಯುತ್ತಿರುವುದಾಗಿ ಸುದೀಪ್ ಪರ ವಕೀಲ ಭಾಸ್ಕರ್ ಅರ್ಜಿ ಸಲ್ಲಿಸಿದ್ದಾರೆ. ಸುದೀಪ್ ವಿದೇಶದಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಿರುವುದರಿಂದ ಸುದೀಪ್ ಪರ ವಕೀಲರು ಪ್ರಿಯಾ ಅವರ ಸಹಿಯಿರುವ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸುದೀಪ್ ದಂಪತಿ 2015ರ ಸೆಪ್ಟೆಂಬರ್ನಲ್ಲಿ ಪರಸ್ಪರ ಸಹಮತದ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆ ನಂತರ ಕಳೆದ 2 ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2017ರ ಜೂನ್ 14 ರಂದು ನಡೆದ ಅರ್ಜಿಯ ವಿಚಾರಣೆಯಲ್ಲಿ ಸುದೀಪ್ ದಂಪತಿ ಹಾಜರಾಗಿರಲಿಲ್ಲ.