ಸಿನಿಮಾ ಸುದ್ದಿ

'ಪ್ರೇಮ ಬರಹ'ದಲ್ಲಿ ಆಂಜನೇಯನಿಗೆ ಅರ್ಜುನ್ ಸರ್ಜಾ ಜೈ!

Prasad SN

ಅರ್ಜುನ್ ಸರ್ಜಾ ಆಂಜನೇಯನ ಭಕ್ತ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ತಮ್ಮದೇ ನಿರ್ದೇಶನದ 'ಪ್ರೇಮ ಬರಹ' ಚಿತ್ರಕ್ಕೆ ಅವರು ಆಂಜನೇಯನ ಕುರಿತಾದ ಹಾಡೊಂದನ್ನು ಕಡೆಗೂ ಸೇರಿಸಿದ್ದಾರೆ.

ಆಂಜನೇಯನ ಕುರಿತಾದ ಹಾಡಿನಲ್ಲಿ ಸ್ಟಾರ್ ನಟರಾದ ದರ್ಶನ್, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸ್ಟೆಪ್ ಹಾಕಿದ್ದಾರೆ. ಹಾಡನ್ನು ಬೆಂಗಳೂರಿನಲ್ಲಿ ಬೃಹತ್ ಆಂಜನೇಯನ ಮೂರ್ತಿ ಎದುರು ಚಿತ್ರೀಕರಿಸಲಾಗಿದೆ.

1993ರಲ್ಲಿ ಬಿಡುಗಡೆಯಾದ 'ಪ್ರತಾಪ್' ಚಿತ್ರ ಪ್ರೇಮ ಬರಹ ಕೋಟಿ ತರಹ ಹಾಡಿನಿಂದ ಈ ಚಿತ್ರದ ಶೀರ್ಷಿಕೆ ಆಯ್ದುಕೊಳ್ಳಲಾಗಿದೆ.

ನಮ್ಮ ತಂಡ ಸೆಟ್ ಗೆ ಭೇಟಿ ನೀಡಿದ ಸಂದರ್ಭ, ಚಿತ್ರದ ನಿರ್ದೇಶಕ-ನಟ ಅರ್ಜುನ್ ಸರ್ಜಾ ಅವರು ಜೈ ಶ್ರೀರಾಮ್ ಎಂದು ಮುದ್ರಿಸಲಾಗಿದ್ದ ಕುರ್ತಾ ತೊಟ್ಟು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ದರ್ಶನ್ ಮತ್ತು ಚಿರಂಜೀವಿ ಸರ್ಜಾ ಅವರು ಇಂದಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಪ್ರೇಮ ಬರಹದಲ್ಲಿ ಚಂದನ್ ಕುಮಾರ್ ನಾಯಕರಾಗಿ ಐಶ್ವರ್ಯ ಅರ್ಜುನ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ, ಐಶ್ವರ್ಯ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು ಮತ್ತು ಸುಹಾಸಿನಿ ಅವರ ತಾರಾಗಣ ಇದೆ. ಈ ಚಿತ್ರಕ್ಕೆ ತಮಿಳಿನಲ್ಲಿ 'ಸೊಲ್ಲಿ ವಿಡವ' ಎಂಬ ಶೀರ್ಷಿಕೆ ಕೊಡಲಾಗಿದ್ದು, ಅದಕ್ಕೂ ಚಂದನ್, ಐಶ್ವರ್ಯ ನಾಯಕ-ನಾಯಕಿಯಾಗಿರುತ್ತಾರೆ. ಎರಡೂ ಭಾಷೆಗೆ ಜೆಸ್ಸಿ ಗಿಫ್ಟ್ ಅವರ ಸಂಗೀತ, ವೇಣುಗೋಪಾಲ ಅವರ ಛಾಯಾಗ್ರಹಣ ಇದೆ.

SCROLL FOR NEXT