2017ರ ಅಂತ್ಯ ನಟ ಶ್ರೀಮುರಳಿಗೆ ಉತ್ತಮವಾಗಿದೆ ಎನಿಸುತ್ತದೆ. ಮಫ್ತಿ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ಶುಕ್ರವಾರ ತೆರೆಕಂಡ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ನಿನ್ನೆಗೆ 15 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. ರಾಜ್ಯದ 250 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ನ ಹಿಂದಿನ ಚಿತ್ರಗಳ ಗಳಿಕೆಯ ದಾಖಲೆಗಳೆಲ್ಲವನ್ನೂ ಮುರಿಯುವ ಲಕ್ಷಣ ಕಾಣುತ್ತಿದೆ ಎಂದು ನಿರ್ಮಾಪಕ ಜಯಣ್ಣ ಹೇಳುತ್ತಾರೆ.
ಥಿಯೇಟರ್ ಗಳಿಗೆ ಭೇಟಿ ನೀಡಿ ಜನರ ಪ್ರತಿಕ್ರಿಯೆ ನೋಡುತ್ತಿರುವ ನಟ ಶ್ರೀಮುರಳಿ ಎಲ್ಲಾ ಕಡೆ ಹೌಸ್ ಫುಲ್ ಕಂಡು ಗೆದ್ದ ಸಂಭ್ರಮದಲ್ಲಿದ್ದಾರೆ. ಮಫ್ತಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅದರ ಮುಂದಿನ ಭಾಗ ಮಾಡುವ ಯೋಚನೆಯಲ್ಲಿ ಶ್ರೀಮುರಳಿ ಇದ್ದಾರೆ.
ಚಿತ್ರವನ್ನು ಸದ್ಯದಲ್ಲಿಯೇ ಮಾಡುವ ಆಲೋಚನೆಯಿಲ್ಲ. ತಮ್ಮ ಹಿಂದಿನ ಬದ್ಧತೆಗಳನ್ನು ಮುಗಿಸಿದ ನಂತರ ಮಫ್ತಿಯ ಮುಂದುವರಿದ ಭಾಗವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಈ ಯುಗದ ಜನರು ಇಷ್ಟಪಡುವ ಚಿತ್ರ ಮಫ್ತಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡನೇ ಭಾಗವನ್ನು ಮಾಡುವ ಯೋಜನೆಯಿದೆ ಎಂದು ಹೇಳಿದರು.
ನರ್ತನ್ ನಿರ್ದೇಶನದ ಚಿತ್ರ ಮಫ್ತಿಯಲ್ಲಿ ವಸಿಷ್ಟ ಸಿಂಹ ಮತ್ತು ಶಾನ್ವಿ ಶ್ರೀವಾಸ್ತವ್ ಕೂಡ ಅಭಿನಯಿಸಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಮತ್ತು ನವೀನ್ ಕುಮಾರ್ ಅವರ ಛಾಯಾಗ್ರಹಣ ಮಫ್ತಿ ಚಿತ್ರಕ್ಕಿದೆ.