ನಟರಾದ ಗಣೇಶ್ ಮತ್ತು ದುನಿಯಾ ವಿಜಯ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹಲವು ಸಮಯಗಳಿಂದ ಕೇಳಿಬರುತ್ತಿದೆ. ಅದೀಗ ನಿಜವಾಗುವ ಕಾಲ ಬಂದಿದೆ. ಇಬ್ಬರು ನಟರ ಸ್ನೇಹಿತರಾದ ನಿರ್ದೇಶಕ ಪ್ರೀತಂ ಗುಬ್ಬಿ ಇಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಈ ವಿಷಯ ಜಾನಿ ಜಾನಿ ಯೆಸ್ ಪಪ್ಪಾ ಸಿನಿಮಾ ಸೆಟ್ ನಿಂದ ಹೊರಬಿದ್ದಿದೆ. ಈ ವಿಷಯವನ್ನು ಸ್ವತಃ ಪ್ರೀತಂ ಗುಬ್ಬಿಯವರೇ ತಿಳಿಸಿದ್ದಾರೆ.
ತಮ್ಮ ಮುಂದಿನ ಚಿತ್ರದಲ್ಲಿ ಮಳೆ ಮತ್ತು ಹೊಡೆದಾಟದ ದೃಶ್ಯಗಳನ್ನು ಒಟ್ಟಿಗೆ ತರಲು ಯೋಚಿಸಿದ್ದಾರಂತೆ. ಗಣೇಶ್ ಮತ್ತು ದುನಿಯಾ ವಿಜಯ್ ಹೆಚ್ಚು ಕಡಿಮೆ ಒಟ್ಟಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿದವರು. ಮುಂಗಾರು ಮಳೆ ಚಿತ್ರದ ಮೂಲಕ ಗಣೇಶ್ ಜನಪ್ರಿಯರಾದರೆ ಸೂರಿ ನಿರ್ದೇಶನದ ದುನಿಯಾ ಮೂಲಕ ವಿಜಯ್ ಹೆಸರು ಗಳಿಸಿದರು. ತೆರೆಯ ಹಿಂದೆ ಕೂಡ ಇಬ್ಬರೂ ಸ್ನೇಹಿತರು. ಇವರಿಬ್ಬರನ್ನು ಇಟ್ಟುಕೊಂಡು ಪ್ರೀತಂ ಗುಬ್ಬಿ ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ನೋಡಬೇಕು.